ಗದಗ: ಮಹಾಮಳೆಯಿಂದ ಕರುನಾಡು ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ಮತ್ತೆ ವಿಪತ್ತು ಸಂಭವಿಸುತ್ತದೆ ಎಂದು ಗದಗದಲ್ಲಿ ಕೋಡಿಮಠದ ಶ್ರೀ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಸ್ವಾಮೀಜಿ, ರಾಜ್ಯ ಅಪಘಾತಕ್ಕೊಳಗಾಗಿದೆ. ಜಲ, ಭೂ, ವಾಯು ಆಘಾತದ ಲಕ್ಷಣಗಳು ಇನ್ನೂ ಬಹಳ ನಡೆಯಲಿವೆ. ಶ್ರಾವಣ ಮಾಸ ಮುಗಿಯುವುದರೊಳಗೆ ಮತ್ತೊಮ್ಮೆ ದೊಡ್ಡ ಜಲ ಆಘಾತವಾಗಲಿದೆ. ಕಾರ್ತಿಕ ಮಾಸದವರೆಗೆ ಅಲ್ಲಲ್ಲಿ ಆಗಾಗ ಅಪಘಾತಗಳು ಬಂದು ಹೋಗುವ ಸಾಧ್ಯತೆ ಎಂದು ಹೇಳಿದ್ದಾರೆ.
ಅಲ್ಲದೆ ಭೂಕಂಪನದಿಂದ ಭೂ ಕುಸಿತ ನಡೆಯಲಿದೆ. ದೊಡ್ಡ ದೊಡ್ಡ ನಗರಗಳಲ್ಲಿ ಕಟ್ಟಡಗಳು ಆಘಾತವಾಗುತ್ತವೆ. ಈ ಸಂವತ್ಸರದಲ್ಲಿ ವಾಯು ಆಘಾತ ನಡೆಯಲಿದೆ. ಈಗಾಗಲೇ ಗಾಳಿಯಿಂದ ಆಘಾತವಾಗಿದೆ, ಬಹಳ ಎಚ್ಚರದಿಂದ ಇರಬೇಕು. ಜಗತ್ತು ಕಂಡರಿಯದ ಆಘಾತವೊಂದು ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ರಾಜ್ಯದ ಸುಮಾರು 17 ಜಿಲ್ಲೆಗಳಲ್ಲಿ ಜಲಪ್ರವಾಹ ಹಾಗೂ ಭೂಕುಸಿತ ಉಂಟಾಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಈ ಮಧ್ಯೆ ಶ್ರೀಗಳ ಭವಿಷ್ಯ ಜನರನ್ನು ಮತ್ತೆ ಆತಂಕಕ್ಕೀಡು ಮಾಡಿದೆ.