ಹಾಸನ: ಇನ್ನೂ ಮಳೆಯಾಗುವ ಲಕ್ಷಣವಿದ್ದು, ಭೂಮಿ ನಡುಗುವುದು, ಆಪತ್ತುಗಳು ಕಳೆದಿಲ್ಲ. ರಾಜಭಯ ಎಲ್ಲವೂ ಕಾರ್ತಿಕ ಮಾಸದ ವರೆಗೆ ಇರಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಮಾಡಾಳು ಗೌರಮ್ಮ ಉತ್ಸವದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಈ ಹಿಂದೆ ನಾನು ಜಗತ್ತಿನ ಭೂಪಟದಲ್ಲಿ ಒಂದು ದೇಶ ಕಾಣೆಯಾಗಲಿದೆ ಎಂದು ಹೇಳಿದ್ದೆ. ಅದರಂತೆ ಇಂದು ಅಫ್ಘಾನಿಸ್ತಾನ ಭೂಪಟದಿಂದ ಕಾಣೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಈ ಭಯ ಇಡೀ ಜಗತ್ತಿನಾದ್ಯಂತ ಇದೆ. ಅದು ಇನ್ನೂ ಹೆಚ್ಚು ಕಾಡಲಿದೆ ಎಂದು ತಿಳಿಸಿದರು.
ಜಗತ್ತಿನಲ್ಲಿ ಕೊರೊನಾ ಇನ್ನೂ ಎರಡು ವರ್ಷ ರೂಪಾಂತರಗೊಳ್ಳತ್ತ ಇರುತ್ತದೆ. ಸೋಂಕಿನಿಂದ ಸಾವಿಗೀಡಾದ ಆತ್ಮ ಅತೃಪ್ತಗೊಂಡು, ಜನರನ್ನು ಕಾಡಲಿದೆ. ಮುಂದಿನ ದಿನಗಳಲ್ಲಿ ಸಾವು-ನೋವುಗಳು ಹೆಚ್ಚಾಗಲಿವೆ ಎಂದು ನುಡಿದರು. ಇದನ್ನೂ ಓದಿ: ಮೊದಲು ಕಾಂಗ್ರೆಸ್ಸನ್ನು ತೊಡೆದು ಹಾಕಿ ಬಿಜೆಪಿಯನ್ನು ಧ್ವಂಸ ಮಾಡಬೇಕು: ಚೇತನ್
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಚಾರವಾಗಿ ಭವಿಷ್ಯ ನುಡಿದ ಕೋಡಿಹಳ್ಳಿ ಶ್ರೀಗಳು, ಬೊಮ್ಮಾಯಿ ಗೊಂಬೆಯಾಗಿದ್ದಾರೆ. ಸೂತ್ರ ನಡೆಸುತ್ತಿರುವಂತೆ ಅವರು ಬೊಂಬೆಯಾಗಿ ಕುಣಿಯುತ್ತಾರೆ. ಇದರ ಸೂತ್ರದಾರಿ ಯಡಿಯೂರಪ್ಪ ಇದ್ದಾರೆ ಸರ್ಕಾರ ನಡೆಸಿಕೊಂಡು ಹೋಗುತ್ತಾರೆ ಎಂದರು.
ಇದು ಹಿಂದೂ ದೇಶ. ಅಂದರೆ ದೈವ, ಧರ್ಮ, ಸತ್ಯ, ನಂಬಿಕೆ, ಸಾಧುಗಳಿರುವ ದೇಶ. ಅಂತಹ ಸಾಧುಗಳು ಬೀದಿಗೆ ಬಂದಾಗ ಇವರು ಅಗೌರವ ಮಾಡಿದರು. ಸಾಧುಗಳು ಬಂದಿದ್ದು ಯಡಿಯೂರಪ್ಪ ಅವರನ್ನು ಉಳಿಸಲು ಅಲ್ಲ. ಕೊರೊನಾ ಇದೆ, ಪ್ರವಾಹ ಇದೆ, ವಿಪರೀತ ಮಳೆಯಿಂದ ಜನ ಸಾಯುತ್ತಿದ್ದಾರೆ. ಸರ್ಕಾರದವರು ಕಿಟ್ ಕೊಡುತ್ತಿದ್ದಾರೆ. ಹಾಹಾಕಾರ ಇದೆ. ಇಂತಹ ಸಂದರ್ಭದಲ್ಲಿ ರಾಜನನ್ನು ಬದಲಿಸುವುದು ಯೋಗ್ಯವಲ್ಲ ಎಂದು ಸರ್ಕಾರಕ್ಕೆ ಸಲಹೆ ಕೊಟ್ಟರು. ಆಡಳಿತ ಪಕ್ಷದವರು ಅದನ್ನು ಧಿಕ್ಕರಿಸಿದರು. ಆ ಫಲವನ್ನು ಸದ್ಯದಲ್ಲೇ ಉಣ್ಣುತ್ತಾರೆ ಎಂದು ಕೋಡಿಶ್ರೀ ಹೇಳಿದರು.