ಮಡಿಕೇರಿ: ಸಾಲದ ಹಣ ವಾಪಸ್ ಕೇಳಿದ ವ್ಯಕ್ತಿಯನ್ನು ತಾಯಿ ಹಾಗೂ ಮಗಳ ಸೇರಿ ಬರ್ಬರವಾಗಿ ಹತ್ಯೆಗೈದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಳೇ ಕೂಡಿಗೆಯಲ್ಲಿ ನಡೆದಿದೆ.
ಕೂಡಿಗೆ ಗ್ರಾಮದ ಶಿವು (35) ಹತ್ಯೆಯಾದ ವ್ಯಕ್ತಿ. ಕಮಲಮ್ಮ (50) ಹಾಗೂ ಹರಿಣಿ ಕೊಲೆ ಮಾಡಿದ ಆರೋಪಿಗಳು. ಘಟನೆಯಿಂದಾಗಿ ಕೂಡಿಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಮನೆ ಲೀಸ್ ಹಾಕಿಕೊಳ್ಳಲು ಶಿವು ಸಂಬಂಧಿ ಕಮಲಮ್ಮಗೆ ಸಾಲ ನೀಡಿದ್ದ. ಕಮಲಮ್ಮ ಪಡೆದಿದ್ದ ಸಾಲವನ್ನು ಮರಳಿಸಲು ಸತಾಯಿಸುತ್ತಿದ್ದಳು. ಇದರಿಂದ ಬೇಸತ್ತ ಶಿವು ಕಳೆದ ಕೆಲವು ದಿನಗಳಿಂದ ಕಮಲಮ್ಮನ ಮನೆಗೆ ಬಂದು ಹಣ ನೀಡುವಂತೆ ಒತ್ತಾಯಿಸಿದ್ದಾನೆ. ಭಾನುವಾರವೂ ಮನೆಗೆ ಬಂದು ಗಲಾಟೆ ಮಾಡಿದ್ದಾನೆ.
ಮನೆಯ ಒಳಗೆ ಬಂದು ಶಿವು ಮೇಲೆ ಕಮಲಮ್ಮ ಹಾಗೂ ಮಗಳು ಹರಿಣಿ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ದೀಪದ ಕಂಬದಿಂದ ಹೊಡೆದು ಹತ್ಯೆಗೈದಿದ್ದಾರೆ. ಬಳಿಕ ಶಿವು ಮೃತ ದೇಹವನ್ನು ಮಂಚದ ಕೆಳಗೆ ಬಚ್ಚಿಟ್ಟು ಪೊಲೀಸ್ ಠಾಣೆಗೆ ಹೋಗಿದ್ದಾರೆ. ಈ ವೇಳೆ ಶಿವು ತಮ್ಮ ಮನೆಗೆ ಆಗಾಗ ಬಂದು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ದಾಖಲಿಸಿ ಮನೆಗೆ ವಾಪಸ್ ಹೋಗಿದ್ದಾರೆ. ಆದರೆ ಶಿವು ಕೊಲೆಯಾದ ವಿಚಾರವನ್ನು ಸ್ಥಳೀಯರು ಆತನ ಕುಟುಂಬದವರಿಗೆ ಹಾಗೂ ಪೊಲೀಸರಿಗೆ ತಿಳಿಸಿದ್ದಾರೆ.
ತಕ್ಷಣವೇ ಶಿವು ಕುಟುಂಬಸ್ಥರು ಕಮಲಮ್ಮನ ಮನೆಯ ಬಾಗಿಲು ಮುರಿದು ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ. ಆದರೂ ಆರೋಪಿಗಳನ್ನು ತಮಗೆ ಒಪ್ಪಿಸುವಂತೆ ಶಿವು ಸಂಬಂಧಿಕರು ಹಾಗೂ ಗ್ರಾಮಸ್ಥರು ಮನೆ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದಾಗಿ ಗ್ರಾಮದಲ್ಲಿ ಕೆಲ ಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಕೊಡಗು ಎಸ್ಪಿ ಡಾ.ಸುಮನ್ ಡಿ ಪನ್ನೇಕರ್ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಭಾಯಿಸಿದರು. ಬಳಿಕ ಮನೆಗೆ ಬಾಗಿಲು ತೆಗೆದು ಮಂಚದ ಕೆಳಗಿದ್ದ ಶಿವು ಮೃತ ದೇಹವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ. ಈ ವೇಳೆ ಶಿವು ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಹೇಳಿಕೆಯನ್ನು ದಾಖಲಿಸಿಕೊಂಡರು.
ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.