ಕೊಡಗು: ಜಿಲ್ಲೆಯಾದ್ಯಂತ ಮಳೆಯಬ್ಬರ ಹೆಚ್ಚಾದ ಹಿನ್ನೆಲೆ ಹಾರಂಗಿ ಡ್ಯಾಂಗೆ (Harangi Dam) ಒಳಹರಿವು ಹೆಚ್ಚಾಗಿದ್ದು, ನಾಲೆಗಳಲ್ಲಿ ಭೂಕುಸಿತ (Land Slide) ಉಂಟಾಗುವ ಸಾಧ್ಯತೆಯಿದೆ.
ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆಯಾಗುತ್ತಿದೆ. ಮಳೆಗಾಲದಲ್ಲೇ ನಾಲೆಗಳ ದುರಸ್ತಿ ಕಾರ್ಯ ನಡೆಸುತ್ತಿರುವುದರಿಂದ ನಾಲೆಯಲ್ಲಿ ಭೂಕುಸಿತ ಉಂಟಾಗುವ ಆತಂಕ ಎದುರಾಗಿದೆ.ಇದನ್ನೂ ಓದಿ: ಯಾವೆಲ್ಲ ದೇಶಗಳಿಗೆ ವೀಸಾ ಮುಕ್ತ ಚೀನಾ ಪ್ರವೇಶ? ಪ್ರವಾಸಿಗರನ್ನು ಸೆಳೆಯಲು ಕಾರಣಗಳೇನು?
ಕೊಡಗು (Kodagu) ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಈ ಹಿನ್ನೆಲೆ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜೊತೆಗೆ ಕಾವೇರಿ ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯಕ್ಕೆ ನೀರು ಹೆಚ್ಚಾದ ಹಿನ್ನೆಲೆ ಕೊಡಗು-ಮೈಸೂರು-ಹಾಸನ ಭಾಗದ ರೈತರು ನಾಲೆಗಳ ಮುಖಾಂತರ ನೀರು ಬಿಡುಗಡೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಕುಶಾಲನಗರ ತಾಲೂಕಿನ ಮದಲಾಪುರ ಗ್ರಾಮದ ಹಾರಂಗಿಯ ಎಡದಂಡೆಯಲ್ಲಿ ಜೆಸಿಬಿ ಮೂಲಕ ಕಾಮಗಾರಿ ನಡೆಸುತ್ತಿದ್ದಾರೆ. ಹೀಗಾಗಿ ಮಳೆ ಸಮಯದಲ್ಲಿ ನಾಲೆಗಳ ಬದಿಯ ಮಣ್ಣು ಸಡಿಲಗೊಂಡು ಭೂಕುಸಿತ ಉಂಟಾಗುವ ಸಾದ್ಯತೆ ಇದೆ.
ಹಾರಂಗಿಯ ನಾಲೆಯಲ್ಲಿ ಕಾಮಗಾರಿ ನಡೆಸಲು ಅವಕಾಶ ಇಲ್ಲ. ಆದರೆ ನಾಲೆಗಳ ಏರಿಯ ಮೇಲೆ ರೋಡ್ ಸರ್ವಿಸ್ ಕೊಡುವುದಕ್ಕೆ ಇಲಾಖೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಮೇ ತಿಂಗಳಲ್ಲಿ ಭಾರೀ ಮಳೆಯಾಗಿ ಕೆಲಸಕ್ಕೆ ತೊಂದರೆ ಉಂಟಾಗಿದೆ. ಈಗ ಕಾಮಗಾರಿ ನಡೆಸಿದರೆ ಮಣ್ಣು ಸಡಿಲಗೊಂಡು ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಮಳೆ ನಿಂತ ಬಳಿಕ ಕಾಮಗಾರಿ ನಡೆಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಕಾವೇರಿ ನೀರಾವರಿ ನಿಗಮದ ಇಲಾಖೆಯ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಇದೀಗ ರೈತರು ಕಂಗಾಲಾಗಿದ್ದಾರೆ.ಇದನ್ನೂ ಓದಿ: ದಿನ ಭವಿಷ್ಯ 19-07-2025