ಮಡಿಕೇರಿ: ಐತಿಹಾಸಿಕ ಮಡಿಕೇರಿ ದಸರಾಕ್ಕೆ (Madikeri Dasara) ತೆರೆಬಿದ್ದಿದೆ. ರಾತ್ರಿ ಇಡೀ ನಡೆದ ಮೈನವಿರೇಳಿಸುವ ದಶಮಂಟಪಗಳ ಶೋಭಾಯಾತ್ರೆಯನ್ನು ಸಾವಿರಾರು ಜನ ಕಣ್ತುಂಬಿಕೊಂಡರು.
ದ್ವನಿ ಬೆಳಕಿನ ಸಂಯೋಜನೆಯೊಂದಿಗೆ ನಡೆದ ಅಬ್ಬರದ ಸ್ತಬ್ಧಚಿತ್ರ ಪ್ರದರ್ಶನ ಜನರನ್ನ ದೇವಲೋಕಕ್ಕೆ ಕರೆದೊಯ್ದಿತ್ತು. ದುಷ್ಟ ಸಂಹಾರದ ಸಂಕೇತ ನವರಾತ್ರಿಯ ಅಂಗವಾಗಿ ನಡೆದ ದಶಮಂಟಪ ಪ್ರದರ್ಶನ ದೇವಾನು ದೇವತೆಗಳ ಪವಾಡವನ್ನು ಭಕ್ತರ ಮುಂದಿಟ್ಟಿತ್ತು.
ಎದೆ ನಡುಗಿಸೋ ಶಬ್ದ, ಅದಕ್ಕೆ ತಕ್ಕಂತೆ ಬೆಳಕು, ಇವೆಲ್ಲವುಗಳಿಗೆ ಪೂರಕವಾಗಿ ನರ್ತಿಸುವ ದೇವರ ಮೂರ್ತಿಗಳು ನೆರೆದಿದ್ದ ಜನರನ್ನ ಒಮ್ಮೆ ದೇವಲೋಕಕ್ಕೆ ಕರೆದುಕೊಂಡು ಹೋಗಿತ್ತು. ಒಂದೊಂದು ಮಂಟಪಗಳಲ್ಲೂ ಒಂದೊಂದು ಕತೆಯನ್ನು ವಿಭಿನ್ನ ರೀತಿಯಲ್ಲಿ ಜನರ ಮುಂದಿಟ್ಟು ಕಲಾವಿದರು ಮೆಚ್ಚುಗೆ ಗಳಿಸಿದರು.
ಹಗಲು ಮೈಸೂರು ದಸರಾದ ವೈಭವನೋಡು ರಾತ್ರಿ ಮಂಜಿನ ನಗರಿ ಮಡಿಕೇರಿ ದಸರಾದ ಸೊಬಗು ನೋಡು ಎಂಬ ಮಾತಿನಂತೆ ಮಡಿಕೇರಿ ದಸರಾ ರಂಗೇರಿತ್ತು. ರಾತ್ರಿ 11ಗಂಟೆಗೆ ಆರಂಭವಾದ ದಶಮಂಟಪಗಳ ಉತ್ಸವ ಬೆಳಿಗ್ಗೆ 5 ಗಂಟೆವರೆಗೂ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಪ್ರವಾಸಿಗರು ಮೆರವಣಿಗೆ ನೋಡಲು ಮುಗಿಬಿದ್ದರು. ನಗರದ ರಸ್ತೆಗಳಲ್ಲಿ ಜನಪ್ರವಾಹವೇ ಹರಿಯುತ್ತಿತ್ತು.
ಲೋಕ ಕಲ್ಯಾಣಕ್ಕಾಗಿ ಅವತಾರವೆತ್ತಿದ ವಿಷ್ಣುವಿನ ಮತ್ಸ್ಯಾವತಾರ, ಸಿಂಧೂರ ಗಣಪತಿ, ಕೊಲ್ಲೂರೂ ಮೂಕಾಂಬಿಕೆ ಮಹಿಮೆ, ಕಾಳಿಂಗ ಮರ್ಧನ, ರಾವಣನ ಸಂಹಾರ. ಕೃಷ್ಣನ ಬಾಲಲೀಲೆ – ಕಂಸವಧೆ ಸೇರಿದಂತೆ ಹಲವು ಪೌರಾಣಿಕ ಕಥಾವಸ್ತುಗಳನ್ನು ನಿರೂಪಿಸಿ ನೀಡಿದ ಪ್ರದರ್ಶನಗಳನ್ನು ಜನ ಕಣ್ತುಂಬಿಕೊಂಡರು.