ಹಾಸನ: ಪ್ರವಾಹದಲ್ಲಿ ಸಿಲುಕಿರುವ ಕೊಡಗಿಗೆ ಹಾಸನದ ಹಾಲು ಡೈರಿ ಒಕ್ಕೂಟದಿಂದ 30 ಸಾವಿರ ಲೀಟರ್ ಹಾಲು ಮತ್ತು 5 ಸಾವಿರ ಪ್ಯಾಕ್ ಬಿಸ್ಕೆಟ್ ರವಾನೆಯಾಗಿದೆ.
ಲೋಕೋಪಯೋಗಿ ಸಚಿವ ಹೆಚ್ಡಿ ರೇವಣ್ಣ ಅವರು ಹಾಲು ರವಾನೆ ಮಾಡಲು ಹಸಿರು ನಿಶಾನೆ ತೋರಿದರು. ಮೂರು ವಾಹನಗಳಲ್ಲಿ ಹಾಲು ಮತ್ತು ಬಿಸ್ಕೆಟ್ ನೀಡಲಾಗಿದೆ. ಇಂದು ಮಧ್ಯಾಹ್ನ ಕಾವೇರಿ ನೀರಿನ ಪ್ರವಾಹದಿಂದ ಸಂತೃಸ್ತರಾಗಿರುವ ಹಾಸನ ರಾಮನಾಥಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಲೋಕೋಪಯೋಗಿ ಸಚಿವ ಹೆಚ್ಡಿ ರೇವಣ್ಣ ಗಂಜಿಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಜನರ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಮಾತನಾಡಿ ಸಚಿವರು, ಒಟ್ಟು ನಷ್ಟದ ಕುರಿತು ಅಧಿಕಾರಿಗಳು ವರದಿ ನೀಡಬೇಕು. ಬಳಿಕ ಪರಿಹಾರ ಕಾರ್ಯದ ಬಗ್ಗೆ ಸ್ಪಷ್ಟವಾಗಿ ಹೇಳುತ್ತೇನೆ. ಪ್ರವಾಹದಿಂದ ಸಂತ್ರಸ್ತರಾಗಿರುವ ಜನರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಕುರಿತು ಅಧಿಕಾರಿ ಮತ್ತು ಸ್ಥಳೀಯರನ್ನು ಕರೆದು ಮಾಹಿತಿ ಪಡೆದು ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.
ಇದೇ ವೇಳೆ ರಾಮನಾಥಪುರ ಕ್ಷೇತ್ರ ಪುಣ್ಯ ಕ್ಷೇತ್ರವಾಗಿದ್ದು ನದಿಗೆ ಶಾಶ್ವತ ತಡೆಗೋಡೆಯ ಕುರಿತು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುತ್ತೇನೆ. ಕ್ಷೇತ್ರದ ಅಭಿವೃದ್ದಿ ಬೇಕಾದ ಕ್ರಮಕೈಗೊಳ್ಳುತ್ತೇನೆ. ಇಲ್ಲಿಯ ದೇವಸ್ಥಾನವನ್ನು ಶೃಂಗೇರಿ ಗುರುಗಳ ಸುಪರ್ದಿಗೆ ನೀಡುವ ಕುರಿತು ಚಿಂತನೆ ನಡೆದಿದೆ. ಇನ್ನು ಪ್ರವಾಹದಿಂದ ಹಾನಿಯಾಗಿರುವ ರಸ್ತೆಗಳ ಮತ್ತು ಇತರೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv