ತುಮಕೂರು: ಮೂಲ ಕಾಂಗ್ರೆಸ್ಸಿಗ, ವಲಸೆ ಕಾಂಗ್ರೆಸ್ಸಿಗ ಎಂದು ಹೇಳುವವರು ಮೂರ್ಖರು ಎಂದು ಹೇಳುವ ಮೂಲಕ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕೆಲ ಕಾಂಗ್ರೆಸ್ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವರು ಮೂಲ, ವಲಸೆ ಎಂದು ಪಕ್ಷವನ್ನು ತಮ್ಮ ಸ್ವಾರ್ಥಕ್ಕಾಗಿ ವಿಭಜನೆ ಮಾಡುತಿದ್ದಾರೆ. ಅಂಥವರು ಮೂರ್ಖರು. ಮುನಿಯಪ್ಪ ಹೇಳಲಿ, ತಿಮ್ಮಪ್ಪ ಹೇಳಲಿ, ಬೊಮ್ಮಪ್ಪ ಹೇಳಲಿ ಯಾವನೇ ಹೇಳಿದರು ಅದು ಅವರ ಸ್ವಾರ್ಥಕ್ಕಾಗಿ ಹೇಳುತ್ತಿದ್ದಾರೆ ಅಷ್ಟೇ. ಕೆಲವರನ್ನು ಬಿಟ್ಟು ಬಹುತೇಕ ಎಲ್ಲಾ ನಾಯಕರು ಒಂದಲ್ಲಾ ಒಂದು ಕಡೆ ಓಡಾಡಿದವರೇ. ಯಾರು ಕೂಡ ಸತ್ಯಹರಿಶ್ಚಂದ್ರರ ಮೊಮ್ಮಕ್ಕಳೇನಲ್ಲಾ ಎಂದು ಹೇಳಿದರು.
ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರು ಹೊರದೇಶದಲ್ಲಿದ್ದು, ಅವರು ಬಂದ ತಕ್ಷಣ ಕೆಪಿಸಿಸಿ ಅಧ್ಯಕ್ಷರ ನೇಮಕ ಆಗಲಿದೆ. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು. ಇದೇ ವೇಳೆ ಕಾರ್ಯಾಧ್ಯಕ್ಷರನ್ನು ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.
ಮೊದಲು ಡಿಸಿಎಂ ಸ್ಥಾನವನ್ನೇ ನೀಡ್ತಿರಲಿಲ್ಲ. ಈಗ ಒಂದಲ್ಲಾ ಎರಡಲ್ಲಾ, ಐದು ಸ್ಥಾನದವರೆಗೂ ಡಿಸಿಎಂ ಮಾಡುತ್ತಿದ್ದಾರೆ. ಕಾರ್ಯಾಧ್ಯಕ್ಷ ಮಾಡಿದಾಕ್ಷಣಕ್ಕೆ ಏನು ಆಗಲ್ಲ, ಅಧ್ಯಕ್ಷರದ್ದೇ ಅಂತಿಮ ತೀರ್ಮಾನವಾಗಿರುತ್ತೆ ಎಂದು ಅಭಿಪ್ರಾಯಪಟ್ಟರು. ಸಿಎಲ್ಪಿ ಹಾಗೂ ವಿಪಕ್ಷನಾಯಕ ಸ್ಥಾನವನ್ನು ಪ್ರತ್ಯೇಕ ಮಾಡುವ ವಿಚಾರಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಸಿದ್ದರಾಮಯ್ಯ ಅವರ ಪರ ಬ್ಯಾಟ್ ಬೀಸಿದರು.