ತುಮಕೂರು: ನಮ್ಮ ಜಿಲ್ಲೆಯವರು ವಿರೋಧ ಪಕ್ಷದ ನಾಯಕರಾಗಲು ಹೊರಟಿದ್ದಾರೆ. ಅವರೇನಾದರೂ ವಿರೋಧ ಪಕ್ಷದ ನಾಯಕರಾದರೆ ಕಾಂಗ್ರೆಸ್ ಸಮಾಧಿಯಾದಂತೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಲಾಬಿ ನಡೆಸಿ ಲೀಡರ್ ಆಗಲು ಹೊರಟಿದ್ದಾರೆ. ಅವರಿಗೆಲ್ಲ 10 ಮತ ಹಾಕಿಸುವ ಯೋಗ್ಯತೆ ಇಲ್ಲ. ಅಂಥವರು ದೊಡ್ಡ ನಾಯಕರಾಗಲು ಹೊರಟಿದ್ದಾರೆ. ಈ ಹಿಂದೆ ಪೋಸ್ಟರ್ ಮೂಲಕ ಪ್ರಚಾರ ಪಡೆದು ನಾಯಕರಾಗಲು ಹೊರಟಿದ್ದರು. ಈಗ ಅವು ನಿಷೇಧವಾಗಿವೆ. ಹೀಗಾಗಿ ಮಾಧ್ಯಮಗಳ ಮುಂದೆ ಇಲ್ಲ ಸಲ್ಲದ ಹೇಳಿಕೆ ನೀಡಿ ಈಗ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ನಲ್ಲಿ ಯಾವ ನಾಯಕರು ಇಲ್ಲ, ಸಿದ್ದರಾಮಯ್ಯನವರು ಇಲ್ಲದಿದ್ದರೆ ಕಾಂಗ್ರೆಸ್ ಪಕ್ಷ ದೊಡ್ಡ ಸೊನ್ನೆಯಾಗಲಿದೆ. ಉಳಿದವರೆಲ್ಲ ಪ್ರಚಾರದ ನಾಯಕರು, ಮಾತನಾಡುವ ನಾಯಕರು. ಮತ ತರುವ ಸಾಮರ್ಥ್ಯ ಯಾರಿಗೂ ಇಲ್ಲ ಎಂದು ಸಿದ್ದರಾಮಯ್ಯನವರ ಪರ ಪ್ಯಾಟ್ ಮಾಡಿದರು.
ಇದೇ ವೇಳೆ ಅನರ್ಹರ ಕುರಿತು ಪ್ರತಿಕ್ರಿಯಿಸಿದ ಅವರು, ಅನರ್ಹರಿಗೆ ನೋಯಿಸಿದರೆ ಬಿಜೆಪಿಗೆ ಶಾಪ ತಟ್ಟಲಿದೆ, ಬಿಜೆಪಿ ಸರ್ಕಾರ ಬಂದಿರುವುದಕ್ಕೆ ಅವರೇ ಕಾರಣ. ಬಿಜೆಪಿ ಅನರ್ಹರಿಗೆ ಕೊಟ್ಟಮಾತನ್ನು ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸ ಇದೆ ಎಂದರು.