ಬೆಂಗಳೂರು: ಪಶು ಆಹಾರದ ಬೆಲೆಯನ್ನು ಸರ್ಕಾರ ಕೂಡಲೇ ಕಡಿಮೆ ಮಾಡಬೇಕು ಅಂತ ಮಾಜಿ ಕೆಎಂಎಫ್ ಅಧ್ಯಕ್ಷ, ಮಾಜಿ ಸಚಿವ ಎಚ್.ಡಿ.ರೇವಣ್ಣ ಆಗ್ರಹಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಎಂಎಫ್ನ 5 ಪಶು ಆಹಾರ ಘಟಕಗಳು ಲಾಭದಲ್ಲಿ ನಡೆಯುತ್ತಿವೆ. ಹೀಗಿದ್ದರೂ ಪಶು ಆಹಾರದ ಬೆಲೆಯನ್ನು ಕೆಎಂಎಫ್ ಹಾಗೂ ಸರ್ಕಾರ ಕಡಿಮೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಈ ವರ್ಷ ಪಶು ಆಹಾರ ಘಟಕಗಳು 65 ಕೋಟಿ ರೂ. ಲಾಭದಲ್ಲಿದ್ದು ಪಶು ಆಹಾರದ ಬೆಲೆಯನ್ನ ಟನ್ ಗೆ 2 ಸಾವಿರ ಕಡಿಮೆ ಮಾಡಬೇಕು. ಸಾಧ್ಯವಾದರೆ 5 ಸಾವಿರ ಕಡಿಮೆ ಮಾಡಿ. ಇಲ್ಲವಾದರೆ ಟನ್ ಗೆ 2 ಸಾವಿರ ಮಾಡಲೇಬೇಕು ಎಂದು ಒತ್ತಾಯಿಸಿದರು.
ನನ್ನ ಅವಧಿಯಲ್ಲಿ ನೋ ಪ್ರಾಫಿಟ್, ನೋ ಲಾಸ್ ಇದ್ದರು ಕಡಿಮೆ ಬೆಲೆಗೆ ಪಶು ಆಹಾರ ನೀಡುತ್ತಿದ್ದೆ. ಆದರೆ ಪ್ರಸ್ತುತ ಸರ್ಕಾರ ಹಾಗೂ ಕೆಎಂಎಫ್, ಖಾಸಗಿ ಕಂಪನಿಗಳ ಜೊತೆ ಡೀಲ್ ಮಾಡಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಬಂದ ಲಾಭವನ್ನು ರೈತರಿಗೆ ನೀಡಿ ಪಶು ಆಹಾರ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು.
ಸಚಿವರ ಹೇಳಿಕೆಗೆ ತಿರುಗೇಟು: ಈ ಮುಂಚೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ಎ.ಮಂಜು ಅವರು ಕೆಎಂಎಫ್ ನಷ್ಟದಲ್ಲಿ ನಡೆಯುತ್ತಿಲ್ಲ. ಕೆಎಂಎಫ್ 12 ಮಹಾಮಂಡಳಿಗಳು ಲಾಭದಲ್ಲಿವೆ. ಬೆಣ್ಣೆ ಸಂಗ್ರಹ ಇಲ್ಲ ಎಂದು ಹೇಳಿದ್ದರು. ಸಚಿವ ಎ.ಮಂಜು ಅವರಿಗೆ ಸವಾಲ್ ಹಾಕಿದ ಅವರು, 10 ಕೆಎಂಎಫ್ ಮಹಾಮಂಡಳಿಗಳು ನಷ್ಟದಲ್ಲಿ ನಡೆಯುತ್ತಿವೆ. ಪ್ರಸಕ್ತ ಸಾಲಿನಲ್ಲಿ 115 ಕೋಟಿ ರೂ. ಲಾಸ್ ನಲ್ಲಿ ನಡೆಯುತ್ತಿದೆ ಎಂದು ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದರು.
ಆದರೆ ಸಚಿವರ ಹೇಳಿಕೆ ಕುರಿತು ಪತ್ರಕರ್ತರು ಮರು ಪ್ರಶ್ನೆ ಹಾಕಿದ ವೇಳೆ ಕೂಡಲೇ ಕೆಎಂಎಫ್ ನ ಮಾರುಕಟ್ಟೆ ನಿರ್ದೇಶಕರಿಗೆ ಪತ್ರಿಕಾಗೋಷ್ಠಿಯ ಮಧ್ಯೆ ರೇವಣ್ಣ ದೂರವಾಣಿ ಕರೆ ಮಾಡಿದರು. ಈ ವೇಳೆ ಮಾತನಾಡಿದ ಅಧಿಕಾರಿ, ಸದ್ಯ 7 ಸಾವಿರ ಮೆಟ್ರಿಕ್ ಟನ್ ಬೆಣ್ಣೆ ಸ್ಟಾಕ್ ಇದೆ. ಕೆನೆರಹಿತ ಹಾಲಿನ ಪುಡಿ 16,680 ಮೆಟ್ರಿಕ್ ಟನ್ ಸ್ಟಾಕ್ ಇದೆ ಎಂದು ಮಾಹಿತಿ ನೀಡಿದರು.
https://www.youtube.com/watch?v=Sa-JwR02H4E