ಝಾನ್ಸಿ ರಾಣಿಗೂ ಮೊದಲೇ ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ಸತ್ಯ ಪ್ರಕಟಣೆ ಅಗತ್ಯ: ಬೊಮ್ಮಾಯಿ

Public TV
5 Min Read
BASAVARAJ BOMMAI 8

ಬೆಳಗಾವಿ: ಝಾನ್ಸಿ ರಾಣಿ ಲಕ್ಷ್ಮೀಬಾಯಿ (Jhansi Rani Lakshmi Bai) 1857ರಲ್ಲಿ ಬ್ರಿಟಿಷರ (British) ವಿರುದ್ಧ ಹೋರಾಟ ಮಾಡಿದ್ದಾರೆ. ಆದರೆ ವೀರರಾಣಿ ಕಿತ್ತೂರು ಚನ್ನಮ್ಮ (Kittur Rani Chennamma) ಅದಕ್ಕೂ ಮುನ್ನವೇ 1824ರಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ. ಈ ಸತ್ಯವನ್ನು ಪ್ರಕಟಣೆ ಮಾಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೂಡ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

ಕಿತ್ತೂರು (Kittur) ರಾಜ್ಯಮಟ್ಟದ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ನಿನ್ನೆಯಿಂದ ಕಿತ್ತೂರು ಉತ್ಸವ ಚಾಲನೆ ನೀಡಬೇಕಿತ್ತು. ನಮ್ಮೆಲ್ಲರ ದುರ್ದೈವ ಸಹೋದರ ಆನಂದ ಮಾಮನಿ ನಿಧನದ ಹಿನ್ನೆಲೆ ಒಂದು ದಿನ ವಿಳಂಬವಾಗಿ ಇಂದು ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.

Basavaraj Bommai KITTUR rani chennamma

1824 ಅಕ್ಟೋಬರ್ 21 ಭಾರತ ಎಂದೂ ಮರೆಯದ ದಿನವಾಗಿದೆ. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಪ್ರಥಮ ಬಾರಿಗೆ ಧ್ವನಿ ಎತ್ತಿದ ಮಹಿಳೆ ವೀರರಾಣಿ ಕಿತ್ತೂರು ಚನ್ನಮ್ಮ. ಬ್ರಿಟಿಷರ ವಿರುದ್ಧ ಧ್ವನಿ ಎತ್ತುವ ಧೈರ್ಯ ಆ ಸಮಯದಲ್ಲಿ ಯಾರಿಗೂ ಇರಲಿಲ್ಲ. ಕಿತ್ತೂರು ಚನ್ನಮ್ಮ ಬರೀ ಧ್ವನಿ ಅಷ್ಟೆ ಅಲ್ಲ, ತಲೆ ಎತ್ತಿ ಹೋರಾಡಿದ್ದರು. ಇದನ್ನು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕು ಎಂದರು.

ಕಿತ್ತೂರು ಚನ್ನಮ್ಮ ಬ್ರಿಟಿಷರ ವಿರುದ್ಧ ಮೊದಲನೇ ಯುದ್ಧದಲ್ಲಿ ಜಯ ಸಾಧಿಸಿ ವಿಜಯೋತ್ಸವ ಮಾಡಿದ್ದರು. ಅದರ ಸವಿನೆನಪಿಗಾಗಿ ಇವತ್ತು ಕಿತ್ತೂರು ಉತ್ಸವ ಮಾಡಲಾಗುತ್ತಿದೆ. ಕಿತ್ತೂರು ಚನ್ನಮ್ಮ ಎಂದರೆ ಮೈಯಲ್ಲಿರುವ ಕೂದಲು ಎದ್ದು ನಿಲ್ಲುತ್ತದೆ, ಅದು ಚನ್ನಮ್ಮಳ ಶಕ್ತಿ. ಸಮಸ್ಯೆ, ಸವಾಲುಗಳನ್ನು ಎದುರಿಸಿ ಹಿಮ್ಮೆಟ್ಟಿ ಜಯ ಸಾಧಿಸಿ ಕೆಲಸ ಮಾಡುವುದು ನಮ್ಮ ಧರ್ಮವಾಗಿದೆ. ಅದರಿಂದ ಹಿಂದೆ ಸರಿದರೆ ಅದು ಸಾರ್ಥಕತೆ ಆಗಲ್ಲ. ಬಾಹ್ಯವಾಗಿ, ಆಂತರಿಕವಾಗಿ ದೇಶದ ಅಖಂಡತೆ ಕಾಪಾಡುವುದು ಬಹಳ ಮುಖ್ಯವಾಗಿದೆ. ಸುದೈವವಾಗಿ ನಮ್ಮ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಇದ್ದಾರೆ. ಉಗ್ರವಾದ ದಮನ ಮಾಡಿದ್ದಾರೆ. ಅಮೆರಿಕ, ಯೂರೋಪ್ ಎಲ್ಲಾ ದೇಶಗಳಲ್ಲಿ ಆರ್ಥಿಕ ಕಂಟಕ ಬಂದಿದೆ, ಆದರೆ ಭಾರತಕ್ಕೆ ಬಂದಿಲ್ಲ. ನರೇಂದ್ರ ಮೋದಿ ಆಡಳಿತದಲ್ಲಿ ಕಿತ್ತೂರು ರಾಣಿ ಚನ್ನಮ್ಮ ದೈರ್ಯ, ಮುಂದಾಲೋಚನೆ ಆಡಳಿತ ಇದೆ. ಕಿತ್ತೂರು ಬಗ್ಗೆ ಎಷ್ಟು ಅಭಿಮಾನ ಪಡುತ್ತಿದ್ದೇವೆಯೋ ಅಷ್ಟೇ ಅಭಿವೃದ್ಧಿಯ ಅವಶ್ಯಕವಿದೆ ಎಂದರು.

KITTUR rani chennamma

ಈ ಭಾಗದ ನೀರಾವರಿ ಯೋಜನೆಗೆ 580 ಕೋಟಿ ರೂ. ಪಡೆದಿದ್ದಾರೆ. ಎಲ್ಲಾ ಊರಿಗೆ ಕುಡಿಯುವ ನೀರು ಪೂರೈಕೆಗೂ ಪ್ರಧಾನಿಯವರ ಜಲಜೀವನ್ ಮಿಷನ್ ಯೋಜನೆ ಅನುಕೂಲವಾಗಿದೆ. ಕಿತ್ತೂರು, ಬೈಲಹೊಂಗಲ, ಖಾನಾಪುರ, ಸವದತ್ತಿ ಸೇರಿ 980 ಕೋಟಿ ರೂ. ನೀಡಿದ್ದೇವೆ ಎಂದು ತಿಳಿಸಿದರು.

ಚನ್ನಮ್ಮ ಅರಮನೆ ನಿರ್ಮಾಣಕ್ಕೆ ನಮ್ಮ ನಾಯಕ ಬಿಎಸ್ ಯಡಿಯೂರಪ್ಪ 50 ಕೋಟಿ ರೂ. ನೀಡಿದ್ದರು. ನಾವು ಈಗ ಅದನ್ನು 115 ಕೋಟಿ ರೂ. ಮಾಡಿದ್ದೇವೆ. ಭೂಸ್ವಾಧೀನಕ್ಕೆ ಎಷ್ಟು ಖರ್ಚು ಬರುತ್ತೋ ಅದನ್ನು ಕೊಟ್ಟು ಅರಮನೆಯ ಪಕ್ಕದಲ್ಲೇ ಕೋಟೆ ನಿರ್ಮಾಣ ಮಾಡುತ್ತೇವೆ. ಮೂಲ ಚನ್ನಮ್ಮ ಕೋಟೆ ಅಭಿವೃದ್ಧಿಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 27 ಕೋಟಿ ರೂ. ನೀಡಲಾಗಿದೆ. ಕಿತ್ತೂರು ಬಳಿಯ ಕೆಐಎಡಿಬಿ ಯೋಜನೆಯಲ್ಲಿ 1 ಸಾವಿರ ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದೇವೆ. ಅಲ್ಲಿ ಕನಿಷ್ಟ 50 ಸಾವಿರ ಯುವಕರಿಗೆ ಕೆಲಸ ಸಿಗಬೇಕೆಂಬ ಅಭಿಲಾಷೆ ನಮ್ಮದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

Basavaraj Bommai 7

ಧಾರವಾಡ – ಕಿತ್ತೂರು – ಬೆಳಗಾವಿ ರೈಲು ಕಾಮಗಾರಿಗೆ ಕೇಂದ್ರ ಒಪ್ಪಿಗೆ ಕೊಟ್ಟಿದೆ. ಭೂಸ್ವಾಧೀನ ಮಾಡಿ ಆದಷ್ಟು ಬೇಗ ಮಾಡುತ್ತೇವೆ ಎಂಬ ಭರವಸೆ ಕೊಡುತ್ತೇನೆ. ಕಿತ್ತೂರು ಕರ್ನಾಟಕದ ಸಮಗ್ರ ಅಭಿವೃದ್ಧಿ ಸಂಕಲ್ಪವನ್ನು ನಮ್ಮ ಸರ್ಕಾರ ಮಾಡಿದೆ. ನಿಮ್ಮೆಲ್ಲರ ಆಶೀರ್ವಾದ, ಚನ್ನಮ್ಮ ಆಶೀರ್ವಾದದಿಂದ 2 ನೀರಾವರಿ ಯೋಜನೆಗೆ ಅನುಮತಿ ಪಡೆಯಬೇಕಿದೆ. ಕೃಷ್ಣ ಮೇಲ್ದಂಡೆ ಸ್ಟೇಜ್ 3 ಯೋಜನೆಗೆ ಅನುಮತಿ ನೀಡಿ, ಆಲಮಟ್ಟಿ ಅಣೆಕಟ್ಟು ಎತ್ತರಕ್ಕೆ ಕ್ರಮಕೈಗೊಳ್ಳಲಾಗಿದೆ. ಆದಷ್ಟು ಬೇಗ ಕಳಸಾ ಬಂಡೂರಿ ಯೋಜನೆಗೂ ಚಾಲನೆ ನೀಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಸತತ 2ನೇ ಸಲ ಉತ್ಸವಕ್ಕೆ ಬಂದಿರುವ ಸಿಎಂ ನಾನೇ. ಈ ಹಿಂದೆ ಮಾಜಿ ಸಿಎಂ ಬಂಗಾರಪ್ಪ ಕಿತ್ತೂರು ಉತ್ಸವವನ್ನು ಆರಂಭ ಮಾಡಿದ್ದರು. ಆದರೆ, ಇದಾದ ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರು. ನಂತರ ಯಾರೊಬ್ಬ ಸಿಎಂ ಕೂಡಾ ಕಿತ್ತೂರು ಉತ್ಸವಕ್ಕೆ ಬರಲು ಹಿಂದೇಟು ಹಾಕಿದ್ದಾರೆ. ಕಿತ್ತೂರು ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೂಢನಂಬಿಕೆ ಇದೆ. ಚಾಮರಾಜನಗರಕ್ಕೆ ಹೋದರೂ ಸಿಎಂ ಪದವಿ ಹೋಗುತ್ತದೆ ಎನ್ನುತ್ತಾರಾದರೂ ಅಲ್ಲಿಗೆ ಹೋಗಿ ಬಂದಿದ್ದೇನೆ. ಎಂತಹ ಮೂಢನಂಬಿಕೆ ನಮ್ಮಲ್ಲಿ ಇದೆ! ನಾನು 2ನೇ ಸಲ ಕಿತ್ತೂರಿಗೆ ಬಂದು, ನಿಮ್ಮ ಮುಂದೆ ನಿಂತಿದ್ದೇನೆ. ಪುಣ್ಯಾತ್ಮ ಒಬ್ಬ ಕಳೆದ ವರ್ಷ ಉತ್ಸವಕ್ಕೆ ಹೋಗಬೇಡಿ ಅಂತ ಹೇಳಿದ್ರು. ಆದರೆ, ನನಗೆ ಅಧಿಕಾರ ಮುಖ್ಯ ಅಲ್ಲ, ರಾಣಿ ಚನ್ನಮ್ಮಳಿಗೆ ಗೌರವ ಸಲ್ಲಿಸುವುದು ಮುಖ್ಯ ಎಂದು ನಾನು ಉತ್ಸವಕ್ಕೆ ಬಂದಿದ್ದೇನೆ ಎಂದು ನುಡಿದರು. ಇದನ್ನೂ ಓದಿ: ಬ್ರಿಟಿಷರು ನಮ್ಮನ್ನು ಇನ್ನೂರು ವರ್ಷಗಳ ಕಾಲ ಆಳಿದರು ಈಗ ಚಕ್ರ ತಿರುಗಿದೆ: ಬೊಮ್ಮಾಯಿ

BASAVARAJ BOMMAI 6

ಸುವರ್ಣ ಸೌಧದ ಮುಂಭಾಗದಲ್ಲಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ. ನವೆಂಬರ್ ತಿಂಗಳಲ್ಲಿ ಬಂದು ನಾನೇ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ಮಾಡುತ್ತೇನೆ. ಬೈಲಹೊಂಗಲದ ರಾಣಿ ಚನ್ನಮ್ಮ ಸಮಾಧಿಗೆ 2 ಕೋಟಿ ರೂ. ಹಣ ಬಿಡುಗಡೆ ಹಾಗೂ ರಾಣಿ ಬೆಳವಡಿ ಮಲ್ಲಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇವೆ ಎಂದರು.

ಇದಕ್ಕೂ ಮೊದಲು ಕಿತ್ತೂರು ಪಟ್ಟಣದ ಕೋಟೆ ಆವರಣದಲ್ಲಿ ಹಮ್ಮಿಕೊಂಡ 2022ರ ರಾಜ್ಯಮಟ್ಟದ ಕಿತ್ತೂರು ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಕಿತ್ತೂರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಕಿತ್ತೂರು ಬಿಜೆಪಿ ಕಾರ್ಯಾಲಯ ಉದ್ಘಾಟನೆ ಮಾಡಿದರು. ಬಳಿಕ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ವೀರ ರಾಣಿ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಕಿತ್ತೂರು ಆಡಳಿತ ಸೌಧ ಉದ್ಘಾಟನೆ ಮಾಡಿದರು.

BASVARAJ BOMMAI

ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕಿತ್ತೂರು ಶಾಸಕರಾದ ಮಹಾಂತೇಶ ದೊಡ್ಡಗೌಡರ, ಮಹಾಂತೇಶ ಕೌಜಲಗಿ, ದುರ್ಯೋಧನ ಐಹೊಳೆ, ಎಂಎಲ್‌ಸಿ ಸಾಬಣ್ಣ ತಳವಾರ ಹಾಗೂ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿ ಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಉಪಸ್ಥಿತರಿದ್ದರು. ಇದನ್ನೂ ಓದಿ: ವರ್ಷಕ್ಕೊಮ್ಮೆ ಪೂಜೆ ಸಲ್ಲುವ ಬೆಟ್ಟದ ತುದಿಯ ದೇವೀರಮ್ಮನ ನೋಡಲು ಹರಿದು ಬಂದ ಭಕ್ತಸಾಗರ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *