ಚಿಕ್ಕಮಗಳೂರು: ಹದಿನೈದು ದಿನಗಳಿಂದ ನಿರಂತರವಾಗಿ ಕೂಲಿ ಕಾರ್ಮಿಕರಿಗೆ ಕಾಣಿಸಿಕೊಳ್ಳುವ ಮೂಲಕ ಭಯ ಹುಟ್ಟಿಸಿದ್ದ ಕಾಳಿಂಗ ಸರ್ಪವನ್ನು ಕೊನೆಗೂ ಕಾಫಿನಾಡಿನಲ್ಲಿ ಸೆರೆ ಹಿಡಿಯಲಾಗಿದೆ.
ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದ ಮಹೇಶ್ ಕಾಫಿ ತೋಟದಲ್ಲಿ ಕಾಳಿಂಗ ಸರ್ಪವೊಂದು ಹದಿನೈದು ದಿನಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುತಿತ್ತು. ಕಾಳಿಂಗನನ್ನ ಕಂಡ ಕೂಲಿ ಕಾರ್ಮಿಕರು ಕೆಲಸ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದರು. ಹೀಗಾಗಿ ತೋಟದ ಮಾಲೀಕ ಮಹೇಶ್ ಸ್ನೇಕ್ ಅರ್ಜುನ್ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಅರ್ಜುನ್ ಸುಮಾರು ಒಂದು ಗಂಟೆಯ ಕಾರ್ಯಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ. ಜೊತೆಗೆ ಸೆರೆಯಾದ ಕಾಳಿಂಗನನ್ನ ಕಂಡು ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಳಿಂಗನನ್ನ ಸೆರೆ ಹಿಡಿದ ಅರ್ಜುನ್ ಕಾಳಿಂಗನ ಪಕ್ಕದಲ್ಲೇ ಕೂತು ನೀರು ಕುಡಿಸಿದ್ದಾರೆ.
ಕಾಳಿಂಗ ಸರ್ಪ ಬಾಯಿ ಬಿಡುವುದನ್ನು ನೋಡಿ ಕೂಲಿ ಕಾರ್ಮಿಕರು ಭಯಪಟ್ಟಿದ್ದಾರೆ. ಆದರೆ ಅರ್ಜುನ್ ಧೈರ್ಯಕ್ಕೆ ಕಾರ್ಮಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಸೆರೆ ಹಿಡಿದಿದ್ದ ಕಾಳಿಂಗನನ್ನ ಅರ್ಜುನ್ ಸ್ಥಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ.