ಚಿಕ್ಕಮಗಳೂರು: ಸೆರೆ ಸಿಕ್ಕ ಕಾಳಿಂಗ ಸರ್ಪ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಿಂತ ಹಾವಾಡಿಗನ ಮೇಲೆ ದಾಳಿ ಮಾಡಲು ಮುಂದಾಗಿ ಹತ್ತಾರು ಬಾರಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆಗೆ ಕಾಫಿನಾಡು ಸಾಕ್ಷಿಯಾಗಿದೆ.
ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹಾಳುಕರಗುಂದ ಗ್ರಾಮದ ಜಾರ್ಜ್ ಎಂಬವರ ಕಾಫಿತೋಟದಲ್ಲಿ ಮೊಲ ಅಟ್ಟಿಸಿಕೊಂಡು ಬಂದ ಕಾಳಿಂಗ ಸರ್ಪ ಕಾಫಿತೋಟದಲ್ಲಿ ಬೀಡು ಬಿಟ್ಟಿದೆ. ಇದನ್ನು ನೋಡಿದ ಕೂಲಿ ಕಾರ್ಮಿಕರು ಭಯಗೊಂಡು ತೋಟದ ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ತೋಟದ ಮಾಲೀಕ ಎನ್.ಆರ್.ಪುರದ ಉರಗ ತಜ್ಞ ಹರೀಂದ್ರ ಅವರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಬಂದ ಹರೀಂದ್ರ ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಕಾಳಿಂಗ ಸರ್ಪವನ್ನು ಸೆರೆಹಿಡಿಯಲು ಯತ್ನಸಿದ್ದಾರೆ. ಆದರೆ ಕಾಳಿಂಗ ಸರ್ಪ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕಿಂತ ಹಾವಾಡಿಗ ರವೀಂದ್ರ ಮೇಲೆ ದಾಳಿಗೆ ಮುಂದಾಗಿದ್ದೇ ಹೆಚ್ಚು. ರವೀಂದ್ರ ಸೆರೆ ಹಿಡಿಯಲು ಬಾಲ ಹಿಡಿದು ಎಳೆಯುತ್ತಿದ್ದಂತೆ ಹತ್ತಾರು ಬಾರಿ ಅವರ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿತು. ಆ ದೃಶ್ಯ ಮಾತ್ರ ನೋಡುಗರಿಗೆ ಎದೆ ಝಲ್ ಎನ್ನಿಸುವಂತ್ತಿತ್ತು.
ಒಂದು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಸೆರೆಹಿಡಿದ 14 ಅಡಿ ಉದ್ದ ಹೆಣ್ಣು ಕಾಳಿಂಗ ಸರ್ಪವನ್ನು ಹರಿಂದ್ರ ಅವರುವ ಸಮೀಪದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಸೆರೆ ಹಿಡಿಯುವಾಗ ಕಾಳಿಂಗ ಸರ್ಪದ ಆರ್ಭಟ ಕಂಡ ತೋಟದ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.