ಬಾಲಕನ ಕಿಡ್ನಾಪ್ – ಸಿಂಗಂ ಸ್ಟೈಲ್‌ನಲ್ಲಿ ಬಾಲಕನನ್ನು ರಕ್ಷಿಸಿದ ಸಿಪಿಐ

Public TV
4 Min Read
Kalaburagi kidnap

ಕಲಬುರಗಿ: ಹೆತ್ತವರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು. ಶಾಲೆಗೆ ಹೋಗುತ್ತಿದ್ದ ಮಗನನ್ನು ಅಪಹರಣ (Kidnapping) ಮಾಡಿದ್ದ ದುರುಳರು, 10 ಲಕ್ಷ ರೂ. ಹಣಕ್ಕೆ ಡಿಮಾಂಡ್ ಮಾಡಿದ್ದರು. ಪೊಲೀಸರಿಗೆ (Police) ಮಾಹಿತಿ ನೀಡಿದರೆ ನಿಮ್ಮ ಮಗ ಜೀವಂತ ಸಿಗೋದಿಲ್ಲ ಅನ್ನೋ ಬೆದರಿಕೆಯನ್ನೂ ಹಾಕಿದ್ದರು. ಆದರೆ ಪೊಲೀಸರ ಮೇಲೆ ವಿಶ್ವಾಸ ಹೊಂದಿದ್ದ ಸರ್ಕಾರಿ ಶಾಲಾ ಶಿಕ್ಷಕ, ಕಲಬುರಗಿ ನಗರದ ವಿಶ್ವವಿದ್ಯಾಲಯ ಠಾಣೆಯ ಸಿಪಿಐ ಅರುಣ್ ಮುರಗುಡಿ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸರು, ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Kalaburagi kidnap 1

ಕಲಬುರಗಿ (Kalaburagi) ನಗರದ ಸಿದ್ದೇಶ್ವರ ಕಾಲೋನಿಯ ನಿವಾಸಿಯಾಗಿರುವ ಗುರುನಾಥ್ ರಾಠೋಡ್ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮೂವರು ಮಕ್ಕಳಿದ್ದು, ಹಿರಿಯ ಮಗ, ಕಲಬುರಗಿ ನಗರದ ಖಾಸಗಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾನೆ. ಬುಧವಾರ ಬೆಳಗ್ಗೆ 9 ಗಂಟೆ ವೇಳೆಗೆ ಗುರುನಾಥ್ ಅವರ ಪುತ್ರ ಸುದರ್ಶನ್, ಶಾಲೆಗೆ ಹೋಗಲು ಮನೆಯಿಂದ ಹೊರಬಂದಿದ್ದ. ಬಾಲಕ (Boy) ಶಾಲಾ ಬಸ್‌ಗಾಗಿ ಕಾಯುತ್ತಿದ್ದಾಗ, ಆಟೋದಲ್ಲಿ ಬಂದಿದ್ದ ದುರುಳರು ಇಎಸ್‌ಐ ಆಸ್ಪತ್ರೆಯ ವಿಳಾಸ ಕೇಳೋ ನೆಪದಲ್ಲಿ ಬಾಲಕನನ್ನು ಮಾತನಾಡಿಸಿ, ಆಟೋದಲ್ಲಿ ಅಪಹರಿಸಿಕೊಂಡು ಹೋಗಿದ್ದರು.

Kalaburagi kidnap 3

ಆಟೋದಲ್ಲಿ ಬಾಲಕನನ್ನು ಕರೆದುಕೊಂಡು ಹೋದ ದುಷ್ಕರ್ಮಿಗಳು ಸ್ವಲ್ಪ ಹೊತ್ತಿನ ನಂತರ ಶಿಕ್ಷಕ ಗುರುನಾಥ್ ಅವರ ಮೊಬೈಲ್‌ಗೆ ಕರೆ ಮಾಡಿ, 10 ಲಕ್ಷ ಹಣವನ್ನು ನೀಡಬೇಕು, ಪೊಲೀಸರಿಗೆ ಮಾಹಿತಿ ನೀಡಿದರೆ ನಿಮ್ಮ ಮಗ ಜೀವಂತ ಉಳಿಯಲ್ಲ ಅಂತ ಬೆದರಿಕೆ ಹಾಕಿದ್ದರು. ಇತ್ತ ಮಗ ಶಾಲೆಯ ಬಸ್ ಹತ್ತಿಲ್ಲ. ಆತನನ್ನು ಯಾರೋ ಕರೆದುಕೊಂಡು ಹೋಗಿದ್ದಾರೆ ಅನ್ನೋದು ಶಿಕ್ಷಕ ಗುರುನಾಥ್‌ಗೆ ಮನದಟ್ಟಾಗಿತ್ತು.

ಅಪಹರಣಕಾರರು ಹೇಳಿದ ಹಾಗೆ ಹಣ ನೀಡಬೇಕಾ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕಾ ಅನ್ನೋ ಬಗ್ಗೆ ಗೊಂದಲದಲ್ಲಿದ್ದ ಶಿಕ್ಷಕ ಗುರುನಾಥ್, ಕೊನೆಗೆ ಪೊಲೀಸರಿಗೆ ಮಾಹಿತಿ ನೀಡುವುದೇ ಉತ್ತಮ ಅಂತ ತಿಳಿದು ಕಲಬುರಗಿ ನಗರದಲ್ಲಿರುವ ವಿಶ್ವವಿದ್ಯಾಲಯ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಪಿಐ ಅರುಣ್ ಮುರಗುಡಿ ಅವರಿಗೆ ಕರೆ ಮಾಡಿ, ಮಗನ ಅಪಹರಣದ ಬಗ್ಗೆ ತಿಳಿಸಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಮಾಡಿದ ಮೊದಲ ಕೆಲಸ, ದೂರು ದಾಖಲಾಗಬೇಕು ಅಥವಾ ತಂದೆ ಠಾಣೆಗೆ ಬರಬೇಕು ಅಂತ ಅಲ್ಲ. ಬದಲಾಗಿ ಮೊದಲು ಬಾಲಕನನ್ನು ರಕ್ಷಣೆ ಮಾಡಬೇಕು ಅಂತ ಫೀಲ್ಡಿಗಿಳಿದಿದ್ದು.

Kalaburagi kidnap 2

ವೃದ್ಧನಿಗೆ ಯಾಮಾರಿಸಿದ ಆರೋಪಿಗಳು: 10 ವರ್ಷದ ಬಾಲಕನನ್ನು ಅಪಹರಣ ಮಾಡಿದ್ದ ದುಷ್ಕರ್ಮಿಗಳು, ಶಿಕ್ಷಕ ಗುರುನಾಥ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಪೊಲೀಸರು ಕರೆ ಮಾಡಿದ ನಂಬರ್ ಪರಿಶೀಲಿಸಿದಾಗ ಗೊತ್ತಾಗಿದ್ದು, ಅದು ಯಾರದೋ ವೃದ್ಧರೊಬ್ಬರದ್ದು ಅಂತ. ಹೌದು, ಕೆಲ ದಿನಗಳ ಹಿಂದೆ ಕಲಬುರಗಿ ನಗರಕ್ಕೆ ಬಂದಾಗ ವೃದ್ಧರೊಬ್ಬರು ವ್ಯಕ್ತಿಯೊಬ್ಬನ ಕೈಗೆ ತನ್ನ ಬಳಿಯಿದ್ದ ಫೋನ್ ನೀಡಿ, ನಂಬರ್ ವೊಂದಕ್ಕೆ ಕರೆ ಮಾಡುವಂತೆ ಹೇಳಿದ್ದರು. ಆದರೆ ಆರೋಪಿ ವೃದ್ಧನ ಮೊಬೈಲ್‌ನಲ್ಲಿದ್ದ ಸಿಮ್ ತೆಗೆದುಕೊಂಡು ಮೊಬೈಲ್ ಮಾತ್ರ ನೀಡಿದ್ದ. ಅದೇ ಸಿಮ್ ಬಳಸಿ, ಶಿಕ್ಷಕ ಗುರುನಾಥ್‌ಗೆ ಕರೆ ಮಾಡಿ 10 ಲಕ್ಷಕ್ಕೆ ಡಿಮಾಂಡ್ ಮಾಡಿದ್ದ.

ಕೆಲವೇ ಗಂಟೆಯಲ್ಲಿ ಬಾಲಕನ ರಕ್ಷಣೆ: ಸಿನಿಮಾ ಶೈಲಿಯಲ್ಲಿ ಬಾಲಕನ ಅಪಹರಣ ನಡೆದಾಗ, ಪೊಲೀಸರು ಕೂಡಾ ಸಿನಿಮೀಯ ರೀತಿಯಲ್ಲಿಯೇ ಬಾಲಕನ ರಕ್ಷಣೆಗೆ ಮುಂದಾಗಿದ್ದರು. ಅದರಂತೆ ಸಿವಿಲ್ ಡ್ರೆಸ್‌ನಲ್ಲಿ ಖಾಸಗಿ ವಾಹನಗಳಲ್ಲಿ ಇಡೀ ಕಲಬುರಗಿ ನಗರದ ಸುತ್ತಮುತ್ತ ಗಸ್ತು ಆರಂಭಿಸಿದ್ದರು. ಮತ್ತೊಂದೆಡೆ ಬಾಲಕನ ತಂದೆಯ ಜೊತೆ ಸಂಪರ್ಕದಲ್ಲಿದ್ದರು. ಹಣ ತರುತ್ತಿದ್ದೇವೆ, ಎಲ್ಲಿಗೆ ಬರಬೇಕು ಅಂತ ಕೇಳಿದ್ದಾಗ ದುಷ್ಕರ್ಮಿಗಳು ಕಲಬುರಗಿ ತಾಲೂಕಿನ ಪಾಳಾ ಬಳಿಯಿರುವ ಶಾಲೆಯೊಂದರಲ್ಲಿ ಹಣ ಇಡಿ ಎಂದು ಹೇಳಿದ್ದರು. ಆದರೆ ಅಷ್ಟರೊಳಗಾಗಿ ಪೊಲೀಸರು ತಮ್ಮನ್ನು ಫಾಲೋ ಮಾಡುತ್ತಿದ್ದಾರೆ ಅನ್ನೋ ಸುದ್ದಿ ತಿಳಿದ ಅಪಹರಣಕಾರರು ಬಾಲಕನನ್ನು ಬಿಟ್ಟು ಪರಾರಿಯಾಗಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಅನಧಿಕೃತ ಹಣ ಸಾಗಾಟ – 10.50 ಲಕ್ಷ ಪೊಲೀಸರ ವಶಕ್ಕೆ

Kalaburagi kidnap 4

ಪಾಳಾ ಗ್ರಾಮದ ಹೊರವಲಯದಲ್ಲಿ ನಿರ್ಜನ ಪ್ರದೇಶದಲ್ಲಿ ಬಾಲಕನನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಇತ್ತ ಬಾಲಕ ಓಡೋಡಿ ಬರ್ತಾಯಿರೋದನ್ನು ನೋಡಿದ್ದ ಕೃಷಿಕರೊಬ್ಬರು ಶಿಕ್ಷಕ ಗುರುನಾಥ್‌ಗೆ ಕರೆ ಮಾಡಿ, ತಮ್ಮ ಮಗ ಇರೋ ಬಗ್ಗೆ ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು, ಬಾಲಕನನ್ನು ರಕ್ಷಿಸಿ, ಹೆತ್ತವರ ಕೈಗೊಪ್ಪಿಸಿದ್ದಾರೆ. ಸಂಜೆ 4 ಗಂಟೆಯಷ್ಟೊತ್ತಿಗೆ ಬಾಲಕ, ಹೆತ್ತವರ ಮಡಿಲು ಸೇರಿದ್ದಾನೆ.

ನಾನು ನಿಜವಾಗಿಯೂ ಪೊಲೀಸರ ಬಗ್ಗೆ ಮೊದಲು ಉತ್ತಮ ಅಭಿಪ್ರಾಯ ಹೊಂದಿರಲಿಲ್ಲ. ಆದರೆ ತನ್ನ ಮಗನನ್ನು ಅಪಹಪರಣ ಮಾಡಿದಾಗ ವಿಶ್ವವಿದ್ಯಾಲಯ ಠಾಣೆಯ ಸಿಪಿಐ ಅರುಣ್ ಮುರಗುಡಿ ಮತ್ತು ಇಡೀ ನಗರ ಪೊಲೀಸರ ಕಾರ್ಯ ನೋಡಿ, ನನ್ನ ಅಭಿಪ್ರಾಯವೇ ಬದಲಾಗಿದೆ. ಅವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಅಂತ, ಸರ್ಕಾರಿ ಶಾಲೆಯ ಶಿಕ್ಷಕ ಗುರುನಾಥ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ, ಧನ್ಯವಾದಗಳನ್ನು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿಯಲ್ಲಿ ಜಾತಿ ಸಮೀಕರಣದ ಬಹುದೊಡ್ಡ ಚಕ್ರವ್ಯೂಹ – ನಡ್ಡಾ ಯಾತ್ರೆಯಲ್ಲಿ 2 ದಿನ 5 ಸಮುದಾಯಗಳೇ ಟಾರ್ಗೆಟ್!

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *