ಬೆಂಗಳೂರು: ಶನಿವಾರ ಬೆಂಗಳೂರಿನ ದಾರಸಹಳ್ಳಿಯಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಇಂದು ಮೈಸೂರಿನ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.
ಹರ್ಷಿತ(10) ಮತ್ತು ಮೋನಿಷ(09) ನಾಪತ್ತೆಯಾಗಿದ್ದ ಮಕ್ಕಳು. ಇವರು ಇಂದು ಮೈಸೂರಿನ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಮನೆ ಮುಂದೆ ಆಟವಾಡುತ್ತಿದ್ದಾಗ ಇಬ್ಬರು ಮುಸುಕುಧಾರಿಗಳು ಅಪಹರಣ ಮಾಡಿದ್ದಾರೆ ಅಂತ ಮಕ್ಕಳು ಹೇಳಿದ್ದಾರೆ.
ಆಟವಾಡುವಾಗ ಚಾಕು ತೋರಿಸಿ ಬಾಯಿಗೆ ಬಟ್ಟೆ ಕಟ್ಟಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಅದಕ್ಕೂ ಮುಂಚೆ ಮನೆಗೆ ಕರೆದುಕೊಂಡು ಹೋಗಿ ಬಟ್ಟೆ ತೆಗೆಸಿಕೊಂಡಿದ್ದಾರೆ. ನಂತರ ಯಶವಂತಪುರದಿಂದ ರೈಲಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಅಂತ ಅಪಹರಣವಾದ ಮಕ್ಕಳು ತಿಳಿಸಿದ್ದಾರೆ.
ಮಕ್ಕಳು ಅಪಹರಣಕಾರರಿಂದ ತಪ್ಪಿಸಿಕೊಂಡು ಮೈಸೂರಿನಲ್ಲಿ ಸಿಕಿದ್ದು, ಸದ್ಯ ಮೈಸೂರು ರೈಲ್ವೇ ಪೊಲೀಸರ ವಶದಲ್ಲಿದ್ದಾರೆ. ಇತ್ತ ಮಕ್ಕಳು ಕಾಣೆಯಾದ ಕುರಿತು ಪೋಷಕರು ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.