ಚಿತ್ರದುರ್ಗ: ಮೊಳಕಾಲ್ಮೂರು ಕ್ಷೇತ್ರಕ್ಕೆ ಇತ್ತೀಚೆಗೆ ಚಿತ್ರನಟರ ದಂಡೇ ಹರಿದು ಬರ್ತಿದೆ. ಈಗಾಗಲೇ ನಟ ಯಶ್ ಭರ್ಜರಿ ರೋಡ್ ಶೋ ನಡೆಸಿದ್ದು, ಇದೀಗ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ಚಿತ್ರನಟ ಸುದೀಪ್ ಕೂಡ ಬಹಿರಂಗ ಸಭೆ ನಡೆಸಲಿದ್ದಾರೆ.
ನಾಯಕನಟ್ಟಿಯ ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಬೆಳಗ್ಗೆ 10 ಗಂಟೆಗೆ ಪೂಜೆ ಸಲ್ಲಿಸಿ ರೋಡ್ ಶೋ ಆರಂಭಿಸಲಿರೋ ಸುದೀಪ್, 11 ಗಂಟೆಗೆ ಕೊಂಡ್ಲಹಳ್ಳಿ, 12 ಗಂಟೆಗೆ ಮೊಳಕಾಲ್ಮೂರು, ನಂತರ 12.45 ಕ್ಕೆ ರಾಂಪುರದಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಲಿದ್ದಾರೆ.
ಸುದೀಪ್ಗೆ ಮಾಜಿ ಸಂಸದೆ ಜೆ. ಶಾಂತ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಸಾಥ್ ನೀಡಲಿದ್ದು, ನಾಯಕ ಸಮುದಾಯ ಹೆಚ್ಚಾಗಿರೋ ಮೊಳಕಾಲ್ಮೂರು ಕ್ಷೇತ್ರದಲ್ಲಿ ನೆಚ್ಚಿನ ನಟ ಸುದೀಪ್ ವೀಕ್ಷಣೆಗೆ ಅಪಾರ ಜನಸ್ತೋಮ ಸೇರುವ ಸಾಧ್ಯತೆ ಇದೆ.
ಮುಂಜಾನೆ ಬಳ್ಳಾರಿಯ ಸಂಡೂರಿನ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರವಾಗಿ ಸಂಡೂರು, ತಾರಾನಗರದಲ್ಲಿ ಪ್ರಚಾರ ನಡೆಸೋ ಸುದೀಪ್ ನಂತರ ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ, ಕೊಂಡ್ಲಹಳ್ಳಿ, ಮೊಳಕಾಲ್ಮೂರು ಹಾಗೂ ರಾಂಪುರ ಕ್ಷೇತ್ರಗಳಲ್ಲಿ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಸದ ಶ್ರೀರಾಮುಲು ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಮಧ್ಯಾಹ್ನ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ ಸಣ್ಣಫಕೀರಪ್ಪ ಪರವಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮೋಕಾ ಸಂಗನಕಲ್ ಕೊಳ್ಳಗಲ್ ಗ್ರಾಮದಲ್ಲಿ ಸುದೀಪ್ ಪ್ರಚಾರ ಕೈಗೊಳ್ಳಲಿದ್ದಾರೆ. ನಂತರ ಸಂಜೆ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಪರವಾಗಿ ಬಳ್ಳಾರಿ ನಗರದ ವಿವಿಧೆಡೆ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ.