ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕೇಳುವ ಕೋರಿಕೆಗಳನ್ನ ಈಡೇರಿಸುತ್ತಾರೆ. ಹೀಗೆ ವಿನುತಾ ಎಂಬ ಅಭಿಮಾನಿಯ ಆಸೆಯನ್ನು ಕೂಡ ಪೂರೈಸಿದ್ದರು. ಆದರೆ ಈಗ ಈ ಅಭಿಮಾನಿಯ ಸಾವಿನ ಸುದ್ದಿ ಕೇಳಿ ಸುದೀಪ್ ಮನನೊಂದಿದ್ದಾರೆ.
ವಿನುತಾ ಕ್ಯಾನ್ಸರ್ ರೋಗದಿಂದ ಬಳುತ್ತಿದ್ದ ಕಿಚ್ಚನ ಅಭಿಮಾನಿ. ವಿನುತಾಗೆ ಕಿಚ್ಚ ಸುದೀಪ್ ಎಂದರೆ ತುಂಬಾನೇ ಇಷ್ಟ. ವಿನುತಾರ ಕೊನೆಯ ಆಸೆಯ ಬಗ್ಗೆ ಕಿಚ್ಚ ಸುದೀಪ್ ಸೇನಾ ಸಮಿತಿಯು ನಟ ಸುದೀಪ್ ಅವರಿಗೆ ಹೇಳಿದ್ದರು. ವಿಷಯ ತಿಳಿದ ನಂತರ ಸುದೀಪ್ ವಿನುತಾ ಕೊನೆಯಾಸೆಯಂತೆ ಅವರನ್ನು ತಮ್ಮ ಜೆ.ಪಿ ನಗರದಲ್ಲಿರುವ ಮನೆಗೆ ಕರೆಸಿ ಭೇಟಿ ಮಾಡಿದ್ದರು. ವಿನುತಾ ಮಾತನಾಡುತ್ತಾ ಹಾಗೂ ಫೋಟೋಗಳನ್ನು ತೆಗೆದುಕೊಳ್ಳುತ್ತಾ ಸುದೀಪ್ ಜೊತೆ ಸಮಯ ಕಳೆದಿದ್ದರು.
ಸುದೀಪ್ರನ್ನು ಭೇಟಿ ಮಾಡಿದ್ದಾಗ ವಿನುತಾ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಕ್ಯಾನ್ಸರ್ ಉಲ್ಬಣಗೊಂಡು ನಾಲ್ಕನೆಯ ಹಂತ ತಲುಪಿತ್ತು. ವೈದ್ಯರು ವಿನುತಾ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಎಂದು ತಿಳಿಸಿದ್ದರು.
ಸುದೀಪ್ ಅವರನ್ನು ಭೇಟಿ ಮಾಡಿದ ಬಳಿಕವೂ ವಿನುತಾ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ ವಿನುತಾ ಸಾವನ್ನಪ್ಪಿದ್ದಾರೆ. ವಿನುತಾ ಸಾವಿನ ಸುದ್ದಿ ಕೇಳಿ ಸುದೀಪ್ ಟ್ವಿಟ್ಟರ್ ನಲ್ಲಿ ವಿನುತಾ ಜೊತೆ ಇರುವ ಫೋಟೋ ಹಾಕಿ “ಇದು ತುಂಬಾ ನೋವಿನ ವಿಚಾರ, ನನ್ನ ತಂಗಿ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಜೊತೆಯಿರುವ ಈ ಫೋಟೋವನ್ನು ನಿಧಿಯಂತೆ ಕಾಪಾಡಿಕೊಳ್ಳುತ್ತೇನೆ” ಎಂದು ಬರೆದು ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೊನೆಯಾಸೆ ತೀರಿದ ಬಳಿಕ ಕೊನೆ ಉಸಿರೆಳೆದ ದರ್ಶನ್ ಅಭಿಮಾನಿ