ಬೆಂಗಳೂರು: ಸ್ಯಾಂಡಲ್ವುಡ್ ಹಿರಿಯ ನಟ, ಲೆಜೆಂಡ್ ಅನಂತ್ ನಾಗ್ ಅವರನ್ನು ಕಂಡರೆ ನಾನು ಸ್ವಾಭಾವಿಕವಾಗಿ ತಲೆ ಬಾಗುತ್ತೇನೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಿಳಿಸಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಿಚ್ಚ ಸುದೀಪ್ ಭಾಗವಹಿಸಿದ್ದರು. ನಾನು ಚಿತ್ರರಂಗದಲ್ಲಿ ತುಂಬಾ ಕಡಿಮೆ ಜನರ ಮುಂದೆ ಸ್ವಭಾವಿಕವಾಗಿ ತಲೆ ಬಾಗುತ್ತೇನೆ. ಅದರಲ್ಲಿ ಅನಂತ್ ನಾಗ್ ಸರ್ ಕೂಡ ಒಬ್ಬರು. ಅನಂತ್ನಾಗ್ ಅವರನ್ನು ನೋಡಿದಾಗೊಮ್ಮೆ ಒಂದು ರೀತಿ ಖುಷಿ ನನ್ನಲ್ಲಿ ಆಗುತ್ತದೆ. ಆ ಖುಷಿಗೆ ಕಾರಣ ಏನೆಂದು ಮಾತ್ರ ನನಗೆ ಗೊತ್ತಿಲ್ಲ. ನೇರ ನುಡಿ ಹಾಗೂ ಸ್ವಭಾವಗಳ ವಿಚಾರದಲ್ಲಿ ಅವರು ನನಗೆ ಟೀಚರ್ ಎಂದು ಕಿಚ್ಚ ತಿಳಿಸಿದ್ದಾರೆ.
ಅನಂತ್ ನಾಗ್ ಅವರು ಕೂಡ ಸುದೀಪ್ ಜೊತೆಯಲ್ಲಿ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಸುದೀಪ್ ನನ್ನನ್ನು ಹೆಚ್ಚು ಇಷ್ಟಪಡುತ್ತಾರೆ. ನನಗೆ ಅವರ ಸ್ವಭಾವ ನೋಡಿ ತುಂಬಾ ಖುಷಿಯಾಗುತ್ತೆ ಎಂದು ಅನಂತ್ ನಾಗ್ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಕಿಚ್ಚ ಸುದೀಪ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಾನು ಚಿತ್ರರಂಗದಲ್ಲಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಹಾಗೂ ಪ್ರಕಾಶ್ ರೈಗೆ ಶರಣಾಗಿದ್ದಾನೆ ಎಂದು ಹೇಳಿದ್ದರು. ನಾನು ವಿಷ್ಣುವರ್ಧನ್ ಸರ್ ಮೇಲೆ ಅಪಾರ ಅಭಿಮಾನ ಹೊಂದಿದ್ದೇನೆ. ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರೀಕರಣದ ವೇಳೆ ವಿಷ್ಣು ಸರ್ ಅವರಿಗೆ ನಾನು ಶರಣಾದೆ ಎಂದು ಸುದೀಪ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.
ವಿಷ್ಣುವರ್ಧನ್ ಅವರನ್ನು ಬಿಟ್ಟರೆ ನಾನು ಪ್ರಕಾಶ್ ರೈ ಅವರಿಗೆ ಶರಣಾದೆ. ಪ್ರಕಾಶ್ ರೈ ಮಾತನಾಡುವಾಗ ಎಕೋ ಹೊಡೆಯುತ್ತೆ. ಅವರು ಎದುರಿಗಿದ್ದರೆ ನನಗೆ ನಟಿಸುವುದ್ದಕ್ಕೆ ಕಷ್ಟ ಆಗುತ್ತದೆ. ನಾನು ಅವರ ಜೊತೆ ರನ್ನ ಚಿತ್ರದಲ್ಲಿ ನಟಿಸಿದೆ. ರನ್ನ ಚಿತ್ರದಲ್ಲಿ ಅವರು ನಟಿಸುವಾಗ ನಾನು ಮಾತನಾಡುತ್ತಿರಲಿಲ್ಲ. ನಾನು ಹಾಗೂ ಪ್ರಕಾಶ್ ರೈ ಹಾರ್ಡ್ ಡಿಸ್ಕ್ ಇದ್ದ ಹಾಗೆ. ಅವರೊಳಗೆ ತುಂಬಾ ವಿಷಯವಿದೆ. ನಾನು ಪ್ರತಿಸಲ ಅವರನ್ನು ಭೇಟಿ ಆಗುವಾಗ ಅವರಿಂದ ಸ್ಫೂರ್ತಿಗೊಳ್ಳುತ್ತೇನೆ ಎಂದು ಪ್ರಕಾಶ್ ರೈ ಬಗ್ಗೆ ಸುದೀಪ್ ಮಾತನಾಡಿದ್ದರು.