– ಸ್ಟಾರ್ಗಳ ಬೆನ್ನು ಬೀಳಲಿದ್ದಾರೆ ಪೊಲೀಸರು
ಬೆಂಗಳೂರು: ಜನರಿಗೆ ಕೋಟ್ಯಂತರ ರೂ. ಹಣ ವಂಚಿಸಿದ್ದ, ಸದ್ಯ ಸಿಐಡಿ ಪೊಲೀಸರ ವಶದಲ್ಲಿರುವ ಹುಬ್ಬಳ್ಳಿಯ ಖಾಸ್ನೀಸ್ ಸಹೋದರರು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.
ಹರ್ಷ ಎಂಟರ್ಟೈನ್ಮೆಂಟ್ ಸಂಸ್ಥೆ ಹೆಸರಲ್ಲಿ ಸಿನಿಮಾ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದ ಖಾಸ್ನೀಸ್ ಸಹೋದರರ ಜೊತೆ ಕನ್ನಡ ಚಿತ್ರರಂಗದ ಖ್ಯಾತನಾಮ ನಿರ್ದೇಶಕರು ಹಾಗೂ ನಟರು ನಂಟು ಹೊಂದಿರುವುದು ಇದೀಗ ಬಹಿರಂಗಗೊಂಡಿದೆ.
ಹರ್ಷ ಅಲಿಯಾಸ್ ಸತ್ಯಬೋಧ ಖಾಸ್ನೀಸ್ ಹಾಗೂ ಆತನ ಸಹೋದರರಾದ ಸಂಜು, ಶ್ರೀನಿವಾಸ್ ಚಿತ್ರರಂಗದ ಕೆಲವು ನಿರ್ದೇಶಕರು ಹಾಗೂ ಕಲಾವಿದರಿಗೆ ಹಣ ಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ. ಖಾಸ್ನೀಸ್ ಸಹೋದರರು ಕೆಲವರ ಹೆಸರುಗಳನ್ನು ಬಾಯ್ಬಿಟ್ಟಿದ್ದು, ಆ ನಿರ್ದೇಶಕರು ಹಾಗೂ ನಟರಿಗೆ ಸದ್ಯದಲ್ಲೇ ನೋಟಿಸ್ ನೀಡಲು ಸಿಐಡಿ ಪೊಲೀಸರು ನಿರ್ಧರಿಸಿದ್ದಾರೆ.
ಹೆಚ್ಚಿನ ಬಡ್ಡಿ ನೀಡುವುದಾಗಿ ಜನರಿಂದ ಸುಮಾರು 600 ಕೋಟಿ ರೂ. ಹಣ ಸಂಗ್ರಹಿಸಿದ್ದ ಖಾಸ್ನೀಸ್ ಸಹೋದದರು ಹಣ ವಾಪಸ್ ನೀಡದೆ ವಂಚಿಸಿದ್ದರು. ಈ ಬಗ್ಗೆ ಧಾರವಾಡದ ಕಲಘಟಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು. ಇದೇ ವಾರ ಪೊಲೀಸರು ಕಾಸ್ನೀಸ್ ಸಹೋದರರನ್ನು ಮಥುರಾದಲ್ಲಿ ಅರೆಸ್ಟ್ ಮಾಡಿ ಕರೆತಂದಿದ್ದರು.
ಸಿಐಡಿ ವಿಚಾರಣೆ ವೇಳೆ ಸಾಕಷ್ಟು ಮಾಹಿತಿಯನ್ನ ಪೊಲೀಸರು ಕಲೆ ಹಾಕಿದ್ದಾರೆ. ಖಾಸ್ನೀಸ್ ಸಹೋದರರಿಗೆ ಸಿನಿಮಾ ಮಾಡುವ ವ್ಯಾಮೋಹವಿತ್ತು. ಚಿತ್ರ ನಿರ್ಮಿಸಿ, ಇದರಿಂದ ಬರುವ ಹಣವನ್ನು ಜನರಿಗೆ ನೀಡಲು ನಿರ್ಧಾರ ಮಾಡಿಕೊಂಡಿದ್ದರು ಎನ್ನಲಾಗಿದೆ. ಐರಾ, ಎಂಟಿವಿ ಸುಬ್ಬಲಕ್ಷ್ಮಿ, ಶಾದಿಭಾಗ್ಯ ಸೇರಿದಂತೆ ಸುಮಾರು 10 ಚಿತ್ರಗಳ ಹೆಸರನ್ನು ಆರೋಪಿಗಳು ನೊಂದಾಯಿಸಿದ್ದರು. ಅಲ್ಲದೆ ಕೆಲ ಚಿತ್ರಗಳ ಚಿತ್ರೀಕರಣವನ್ನು ಶುರು ಮಾಡಿದ್ದರು. ಚಿತ್ರೀಕರಣದ ವೀಡೀಯೊವನ್ನ ವಶಕ್ಕೆ ಪಡೆದಿರೊ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.