ಕೋಲಾರ: ಸಮಸ್ಯೆ ಕುರಿತು ದೂರು ನೀಡಲು ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆಯೇ ಕೆಜಿಎಫ್ ನಗರ ಸಭೆ ಕಾಂಗ್ರೆಸ್ ಸದಸ್ಯರೊಬ್ಬರು ಮಾರಣಾತಿಂಕವಾಗಿ ಹಲ್ಲೆ ಮಾಡಿ ಗುಂಡಾ ವರ್ತನೆ ಮೆರೆದಿದ್ದಾರೆ.
ಕೆಜಿಎಫ್ನ 33ನೇ ವಾರ್ಡ್ ನಿವಾಸಿ ಭಾಸ್ಕರ್ ಹಲ್ಲೆಗೆ ಒಳಗಾದ ದೂರುದಾರ. ಸ್ಟಾನ್ಲಿ ಹಲ್ಲೆ ನಡೆಸಿದ ನಗರಸಭೆ ಸದಸ್ಯ. ನಗರಸಭೆ ಆಯುಕ್ತ ಶ್ರೀಕಾಂತ್ ಎದುರಲ್ಲೇ ಘಟನೆ ನಡೆದಿದ್ದು, ಕಚೇರಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ನಡೆದದ್ದು ಏನು?
ಕೆಜಿಎಫ್ನ 33ನೇ ವಾರ್ಡ್ ರಾಜಕಾಲುವೆಯನ್ನು ಒತ್ತುವರಿ ಮಾಡಲಾಗಿದೆ ಅಂತಾ ದೂರು ನೀಡಲು ಭಾಸ್ಕರ್ ಆಯುಕ್ತರ ಕಚೇರಿಗೆ ಬಂದಿದ್ದರು. ಆಗ ಅಲ್ಲಿಯೇ ಇದ್ದ ಸ್ಟಾನ್ಲಿ ನನ್ನ ವಿರುದ್ಧವೇ ದೂರು ನೀಡುತ್ತೀಯಾ ಥಳಿಸಿದ್ದಾರೆ. ಅಷ್ಟಕ್ಕೆ ಬಿಡದೇ ಸ್ಟಾನ್ಲಿ ಸಹಚರರು ಆಯುಕ್ತರ ಎದುರಲ್ಲಿಯೇ ಭಾಸ್ಕರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಈ ಕುರಿತು ಬುಧವಾರ ಮಧ್ಯಾಹ್ನ ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದ ಭಾಸ್ಕರ್ ಮೇಲೆ, ಕೆಲ ಪೊಲೀಸ್ ಅಧಿಕಾರಿಗಳು ರೇಗಾಡಿದ್ದಾರೆ. ನಿನ್ನದೆ ತಪ್ಪು ಇದೆ, ಸುಮ್ಮನೆ ಇಲ್ಲಿಂದ ಹೋಗು ಅಂತಾ ಗದರಿಸಿದ್ದರಂತೆ. ಸಂಜೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು, ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ಭಾಸ್ಕರ್ ಮಾನವ ಹಕ್ಕುಗಳ ಜಾಗೃತಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಇದರಿಂದಾಗಿ ನಗರಸಭೆ ಸದಸ್ಯರ ಅಕ್ರಮಗಳನ್ನು ಹೊರ ಹಾಕುತ್ತಿದ್ದರು. ಹಳೇ ವೈಷಮ್ಯದಿಂದ ಭಾಸ್ಕರ್ ಮೇಲೆ ಸ್ಟಾನ್ಲಿ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv