ಬೆಂಗಳೂರು: ಜೈಲಿನಿಂದ ಹೊರಬಂದ ಮೂರೇ ದಿನದಲ್ಲಿ ರೌಡಿಶೀಟರ್ ನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನಗರದ ಕೆ.ಜಿ.ಹಳ್ಳಿಯಲ್ಲಿ ನಡೆದಿದೆ.
ಕೆಜಿಹಳ್ಳಿಯ ಬಿಟಿಎಂ ಲೇಔಟ್ ನಿವಾಸಿ ತಬ್ರೇಜ್ ಕೊಲೆಯಾದ ರೌಡಿಶೀಟರ್. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ತಬ್ರೇಜ್ ಎರಡು ದಿನದ ಹಿಂದೆಯಷ್ಟೇ ಬಿಡುಗಡೆಯಾಗಿ ಬಂದಿದ್ದನು. ಹಾಗೇ ಬಂದವನೇ ಮತ್ತೆ ಅದೇ ಖದರ್ ನಲ್ಲಿ ರಸ್ತೆ ಬದಿಯ ಅಂಗಡಿಯೊಂದರ ಬಳಿ ಸ್ಟೈಲ್ ಆಗಿ ಸಿಗರೇಟು ಸೇದುತ್ತಿದ್ದನು. ಈ ವೇಳೆ ಏಕಾಏಕಿ ಆಟೋದಲ್ಲಿ ಬಂದ ಐದಾರು ಜನರ ಗುಂಪೊಂದು ಮಾರಕಾಸ್ತ್ರಗಳು ಹಿಡಿದು ತಬ್ರೇಜ್ನನ್ನು ಅಟ್ಟಾಡಿಸಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಹತ್ತಾರು ಜನರು ಕಣ್ಮುಂದೆಯೇ ರೌಡಿ ತಬ್ರೇಜ್ ತೀವ್ರ ರಕ್ತಸ್ತ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲ ತಿಂಗಳ ಹಿಂದೆ ರೌಡಿ ತಬ್ರೇಜ್ ಎದುರು ಗುಂಪಿನ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಜೈಲಿಗೆ ಹೋಗಿದ್ದ ಎನ್ನಲಾಗಿದೆ. ಅದೇ ಪ್ರಕರಣದಲ್ಲಿ ಬಿಡುಗಡೆಯಾಗಿ ಹೊರಗಡೆ ಬಂದ ವೇಳೆ ಕೊಲೆಯಾಗಿರಬಹುದು ಅಂತ ಶಂಕಿಸಲಾಗಿದೆ. ಮೇಲ್ನೋಟಕ್ಕೆ ಇದು ಹಳೇ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವ ಸಾಧ್ಯತೆಯಿದ್ದು, ಆ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.