ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೆಎಫ್ಡಿ ವೈರಸ್ ಪತ್ತೆಯಾಗಿದೆ. ಕೊಪ್ಪ ತಾಲೂಕಿನ ಜಯಪುರ ಸಮೀಪದ ಶಾಂತಿಗ್ರಾಮದಲ್ಲಿ ವೈರಸ್ ಪತ್ತೆಯಾಗಿದ್ದು ಮಂಗನ ಕಾಯಿಲೆ ಭೀತಿಯಲ್ಲಿ ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ.
ಜನವರಿ 9ರಂದು ಪ್ರಾಣಿಗಳ ಉಣ್ಣೆಯಲ್ಲಿ ಪಾಸಿಟಿವ್ ಅಂಶ ಇರುವುದನ್ನು ಶಿವಮೊಗ್ಗ ಪ್ರಯೋಗಾಲಯ ಪತ್ತೆಹಚ್ಚಿದೆ. ಕಳೆದ ವರ್ಷ ಜಿಲ್ಲೆಯಲ್ಲಿ 35 ಮಂಗಗಳು ಸಾವನ್ನಪ್ಪಿದ್ದವು, ಅದರಲ್ಲಿ 18 ಮಂಗಗಳ ಅಂಗಾಂಗ ಪರೀಕ್ಷೆ ನಡೆಸಲಾಗಿತ್ತು. ಆ ವೇಳೆ ಒಂದು ಮಂಗದ ದೇಹದಲ್ಲಿ ಪಾಸಿಟಿವ್ ವೈರಸ್ ಪತ್ತೆಯಾಗಿತ್ತು. ಅಲ್ಲದೆ ಕೊಪ್ಪ ತಾಲೂಕಿನ ಜಯಪುರದ ವ್ಯಕ್ತಿಯೊಬ್ಬರ ದೇಹದಲ್ಲೂ ಕೂಡ ಪಾಸಿಟಿವ್ ಅಂಶ ಪತ್ತೆಯಾಗಿತ್ತು. ಇದನ್ನೂ ಓದಿ: ಏನಿದು ಮಂಗನ ಜ್ವರ? ಕಾಯಿಲೆ ಹೇಗೆ ಬರುತ್ತೆ? ರೋಗ ಲಕ್ಷಣ ಏನು? ಚಿಕಿತ್ಸೆ ಹೇಗೆ- ಇಲ್ಲಿದೆ ಸಂಪೂರ್ಣ ಮಾಹಿತಿ
ಇದೀಗ ಕೆಎಫ್ಡಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜನರಿಗೆ ಔಷಧಿ ನೀಡಲು ವೈದ್ಯರ ತಂಡ ಮುಂದಾಗಿದೆ. ಜಿಲ್ಲಾ ವಿಚಕ್ಷಣ ಅಧಿಕಾರಿ ಮಂಜುನಾಥ್ ನೇತೃತ್ವದ ತಂಡದಿಂದ ತರೀಕೆರೆ ಮೂಡಿಗೆರೆ ಕೊಪ್ಪ ತಾಲೂಕಿನ ನೂರಾರು ಜನರಿಗೆ ಔಷಧಿ ನೀಡಲಾಗುತ್ತಿದೆ. ಅಲ್ಲದೆ ಮಂಗನ ಕಾಯಿಲೆ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.