ತಿರುವನಂತಪುರಂ: ಜ್ವರದಿಂದ ಬಳಲುತ್ತಿದ್ದ 45 ವರ್ಷದ ಮಹಿಳೆಯೊಬ್ಬರಿಗೆ ತಪ್ಪಾದ ಚುಚ್ಚುಮದ್ದನ್ನು ನೀಡಿದ್ದರಿಂದ ಸಾವನ್ನಪ್ಪಿರುವ ಘಟನೆ ಕೇರಳದ (Kerala) ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ( Kozhikode Medical College) ನಡೆದಿದೆ.
ಮೃತರನ್ನು ಕೋಯಿಕ್ಕೋಡ್ನ ಕೂಡರಂಜಿ ನಿವಾಸಿ ಸಿಂಧು ಎಂದು ಗುರುತಿಸಲಾಗಿದೆ. ನರ್ಸ್ ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ಸಿಂಧು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಗುರುವಾರ ತೀವ್ರ ಜ್ವರದಿಂದ ಬಳಲುತ್ತಿದ್ದ ಸಿಂಧು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಗ್ಗೆ ಚೆನ್ನಾಗಿಯೇ ಇದ್ದರು, ಆದರೆ ನರ್ಸ್ ತಪ್ಪಾದ ಇಂಜೆಕ್ಷನ್ ನೀಡಿದ ಬಳಿಕ ಅವರ ಆರೋಗ್ಯ ಹದಗೆಡಲು ಪ್ರಾರಂಭವಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಮೃತ ಸಿಂಧು ಪತಿ ರಘು ಅವರು, ಇದು ನರ್ಸ್ನ ತಪ್ಪು, ಕೊನೆ ಕ್ಷಣದಲ್ಲಿ ನನ್ನ ಹೆಂಡತಿ ಬಹಳ ಬೆವರುತ್ತಿದ್ದಳು. ಇಂಜೆಕ್ಷನ್ ನೀಡಿದ ಬಳಿಕ ನಾನು ಆರೋಗ್ಯವಾಗಿಲ್ಲ ಎಂದು ಹೇಳುತ್ತಿದ್ದಳು. ಹೀಗಾಗಿ ನರ್ಸ್ಗೆ ಕರೆ ಮಾಡಿ ಕೇಳಿದಾಗ ಭಯ ಪಡುವ ಅಗತ್ಯವಿಲ್ಲ. ಅವರ ಆರೋಗ್ಯ ಸ್ಥಿರವಾಗಿಯೇ ಇದೆ ಎಂದು ಹೇಳಿದ್ದರು. ಆದರೆ ಇಂಜೆಕ್ಷನ್ ನೀಡಿದ ಬಳಿಕ ನನ್ನ ಪತ್ನಿ ಆರೋಗ್ಯ ಹದಗೆಡಲು ಆರಂಭವಾಯಿತು. ನನ್ನ ಮಡಿಲಿನಲ್ಲಿಯೇ ನನ್ನ ಪತ್ನಿ ಪ್ರಾಣಬಿಟ್ಟಿದ್ದಾಳೆ. ನಿನ್ನೆ ಬಳಸಿದ್ದ ಔಷಧವನ್ನೇ ಇಂದು ಕೂಡ ಆಸ್ಪತ್ರೆಯಲ್ಲಿ ಬಳಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಂಡೇ ಮಠದ ಸ್ವಾಮೀಜಿ ಆತ್ಮಹತ್ಯೆ ಹಿಂದೆ ಲೋಕಲ್ ಸ್ವಾಮೀಜಿ ಕೈವಾಡ!
ಆದರೆ ಆಸ್ಪತ್ರೆ ಮಾತ್ರ ಕುಟುಂಬಸ್ಥರ ಆರೋಪವನ್ನು ನಿರಾಕರಿಸಿದ್ದು, ಮಹಿಳೆ ಅಚಾನಕ್ ಆಗಿ ಸಾವನ್ನಪ್ಪಿರವ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿದುಬಂದಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಈ ಬಗ್ಗೆ ಮೃತ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಘಟನೆ ಸಂಬಂಧ ಸಂಪೂರ್ಣ ತನಿಖೆ ನಡೆಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಆದೇಶಿಸಿದ್ದಾರೆ. ಇದನ್ನೂ ಓದಿ: ‘ಹೆಂಡ್ತಿ ಮಕ್ಳನ್ನು ಬಿಟ್ ಬಂದಿದ್ದೀನಿ, ಸೇಫ್ ಆಗಿ ಮನೆಗೆ ಹೋಗ್ತೀನಾ?’: ಗಂಧದ ಗುಡಿಯಲ್ಲಿ ಕಣ್ಣೀರು ತರಿಸುತ್ತೆ ಅಪ್ಪು ಡೈಲಾಗ್