ತಿರುವನಂತಪುರಂ: ಕೇರಳದಲ್ಲಿ 2017 ರಲ್ಲಿ ನಡೆದಿದ್ದ ವಲಯರ್ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಕೆಲ ಜನರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ವಲಯರ್ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಧು ಎಂಬವನ ಮೇಲೆ ಐದು ಜನರ ಗುಂಪೊಂದು ದಾಳಿ ಮಾಡಿ ಆತನನ್ನು ಚೆನ್ನಾಗಿ ಥಳಿಸಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಆರೋಪಿಯು ಪಲಕ್ಕಾಡ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ವಲಯರ್ ಪೊಲೀಸ್ ಠಾಣೆಯ ಅಧಿಕಾರಿಗಳು, ಮೊದಲಿಗೆ ಐದು ಜನರ ಗುಂಪೊಂದು ಆರೋಪಿ ಮಧುವಿನ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ಆರೋಪಿಯನ್ನು ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಐದು ಮಂದಿಯಲ್ಲಿ ಮೂವರನ್ನು ನಾವು ವಶಕ್ಕೆ ಪಡೆದಿದ್ದೇವೆ. ಆಸ್ಪತ್ರೆಗೆ ಹೋಗಿ ಹಲ್ಲೆಗೊಳಾಗದ ಆರೋಪಿಯ ಬಳಿ ಹೇಳಿಕೆಯನ್ನು ಪಡೆದು ಬಂದಿದ್ದೇವೆ ಎಂದು ಹೇಳಿದ್ದಾರೆ.
ಏನಿದು ವಲಯರ್ ಅತ್ಯಾಚಾರ ಪ್ರಕರಣ?
2017 ರಲ್ಲಿ ಕೇರಳದ ಪಲಕ್ಕಾಡ್ ಜಿಲ್ಲೆಯ ವಲಯರ್ ಪ್ರದೇಶದ ಹಳೆಯ ಮನೆಯೊಂದರಲ್ಲಿ 13 ವರ್ಷದ ಅಪ್ರಾಪ್ತೆಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆದರೆ ಮೃತಪಡುವುದಕ್ಕೂ ಮುನ್ನ ಆಕೆಯನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಈ ಸಾವಿನ ಪ್ರಕರಣದಲ್ಲಿ ಸಂತ್ರಸ್ತೆಯ 9 ವರ್ಷದ ತಂಗಿ ಅಕ್ಕ ಸಾವನ್ನಪ್ಪಿದ ದಿನ ನಮ್ಮ ಮನೆ ಬಳಿ ಇಬ್ಬರು ಅನುಮಾಸ್ಪದವಾಗಿ ಓಡಾಡುತ್ತಿದ್ದರು ಎಂದು ಸಾಕ್ಷಿ ಹೇಳಿದ್ದಳು.
ಈ ಘಟನೆಯಾದ ಎರಡು ತಿಂಗಳ ಬಳಿಕ 9 ವರ್ಷದ ತಂಗಿಯೂ ಸಹ ಅದೇ ಜಗದಲ್ಲಿ ಅದೇ ರೀತಿಯಾಗಿ ಕೊಲೆಯಾಗಿದ್ದಳು. ಆಕೆಯ ಮರಣೋತ್ತರ ಪರೀಕ್ಷೆಯ ನಂತರ ಸಂತ್ರಸ್ತೆಯನ್ನು ಅತ್ಯಾಚಾರ ಮಾಡಲಾಗಿದೆ ಎಂದು ವರದಿ ಬಂದಿತ್ತು. ಈ ಸಹೋದರಿಯರ ಪ್ರಕರಣವು ಕೇರಳದಲ್ಲಿ ಕೋಲಾಹಲನ್ನು ಸೃಷ್ಟಿಸಿತ್ತು. ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಪೊಲೀಸ್ ಇಲಾಖೆಯ ಮೇಲೆ ಒತ್ತಡ ಹಾಕಲಾಗಿತ್ತು.
ಸಾರ್ವಜನಿಕರ ಒತ್ತಡಕ್ಕೆ ಮಣಿದ ಪೊಲೀಸ್ ಸಂತ್ರಸ್ತ ಸಹೋದರಿಯರ ಮನೆಗೆ ಸದಾ ಬರುತ್ತಿದ್ದ ಮೂವರನ್ನು ಈ ಪ್ರಕರಣದಲ್ಲಿ ಅರೆಸ್ಟ್ ಮಾಡಿದ್ದರು. ಆದರೆ ಸ್ಥಳೀಯ ನ್ಯಾಯಾಲಯವು ಈ ಪ್ರಕರಣದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಈ ವಿಚಾರವಾಗಿ ಹೈಕೋರ್ಟಿನಲ್ಲಿ ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ.