ನವದೆಹಲಿ: ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ ಮಾಡಿದ ರಾಜ್ಯ ಸರ್ಕಾರ ಆದೇಶದ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಲಾಗಿದೆ. ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.
ಕೇರಳ ಮೂಲದ ವಕೀಲ ಆರ್ ಎಸ್ ಜೆನಾ ರಿಂದ ಅರ್ಜಿ ಸಲ್ಲಿಸಿದ್ದು ಆದೇಶ ವಾಪಸ್ ಪಡೆಯಲು ಸೂಚಿಸುವಂತೆ ಅರ್ಜಿಯಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ಪ್ರವೇಶಕ್ಕೆ 72 ಗಂಟೆಗಳ ಒಳಗಿನ RTPCR ವರದಿ ಕಡ್ಡಾಯ ಮಾಡಿರುವುದು ಸರಿಯಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಆರ್ಟಿಪಿಸಿಆರ್ ವರದಿ ಕಡ್ಡಾಯದಿಂದ ಗಡಿಯಲ್ಲಿ ಶಿಕ್ಷಣ, ವ್ಯಾಪಾರ, ಉದ್ಯೋಗಗಳು, ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಕಾರಣಗಳಿಗಾಗಿ ಪ್ರತಿದಿನ ಕರ್ನಾಟಕಕ್ಕೆ ಭೇಟಿ ನೀಡುವ ಜನರಿಗೆ ತೊಂದರೆಯಾಗಲಿದೆ. ಮತ್ತು ಗಡಿಗಳಲ್ಲಿನ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಡ್ರಗ್ಸ್, ಸಿಗರೇಟ್, ಸೆಕ್ಸ್ಗೆ ಮಗನಿಗೆ ಓಕೆ ಅಂದಿದ್ದೇನೆ: ಶಾರೂಖ್ ವೀಡಿಯೋ ವೈರಲ್
ಮಂಜೇಶ್ವರಂ ಕ್ಷೇತ್ರದ ಜನರು ಮಂಗಳೂರಿನ ಮೇಲೆ ಅವಲಂಬಿಸಿರುವ ಬಗ್ಗೆಯೂ ಮಾಹಿತಿ ನೀಡಿರುವ ವಕೀಲರು, ಮಂಗಳೂರಿನ ಮೇಲೆ ಮಂಜೇಶ್ವರದ ಜನರು ಸಂಪೂರ್ಣ ಅವಲಂಬಿಸಿದ್ದು ನಿತ್ಯ ಸಾವಿರಾರು ಜನರು ಸಂಚಾರ ಮಾಡ್ತಾರೆ. ಅವರೆಲ್ಲರೂ ಪ್ರತಿದಿನ ವರದಿ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಜುಲೈ 31 ರಂದು ಮಂಗಳೂರು ಡಿಸಿ ಹೊರಡಿಸಿರುವ ಆದೇಶ ವಾಪಸ್ ಪಡೆಯುವಂತೆ ಸೂಚಿಸಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹತ್ಯಾಕಾಂಡದ ನಂತರವೂ ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ: ರಾಹುಲ್ ಗಾಂಧಿ
ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದಲ್ಲೂ ಸೋಂಕು ಹೆಚ್ಚಾಗುವ ಭೀತಿಯಿಂದ ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಜನರು ಆರ್ಟಿಪಿಸಿಆರ್ ವರದಿ ಕಡ್ಡಾಯವಾಗಿ ತರುವಂತೆ ಸೂಚಿಸಿ ಜುಲೈ 31 ರಂದು ಆದೇಶ ಮಾಡಲಾಗಿತ್ತು. ಈ ಆದೇಶ ಪ್ರಶ್ನಿಸಿ ಕೇರಳ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಆದರೆ ವಿಚಾರಣೆ ನಡೆಸಿದ ಹೈಕೋರ್ಟ್ ಕರ್ನಾಟಕ ರಾಜ್ಯ ಸರ್ಕಾರದ ಸುತ್ತೊಲೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಅದು ನಮ್ಮ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿ ಅರ್ಜಿ ವಜಾ ಮಾಡಿತ್ತು. ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಈಗ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.