Latest
ಮಕ್ಕಳ ಹುಟ್ಟುಹಬ್ಬಕ್ಕೆ ನೇಪಾಳಕ್ಕೆ ಪ್ರವಾಸ ತೆರಳಿ ಶವವಾದ ಕುಟುಂಬ

ನೇಪಾಳ: ಮೂರು ಮಕ್ಕಳ ಹುಟ್ಟುಹಬ್ಬಕ್ಕೆಂದು ನೇಪಾಳಕ್ಕೆ ಪ್ರವಾಸ ತೆರಳಿದ್ದ ಕೇರಳದ ಕೊಚ್ಚಿ ಮೂಲದ ಕುಟುಂಬವೊಂದು ಹೋಟೆಲ್ವೊಂದರಲ್ಲಿ ದುರಂತ ಸಾವಿಗೀಡಾಗಿದೆ.
ಮೃತರನ್ನು ತಿರುವನಂತಪುರ ನಿವಾಸಿ ಪ್ರವೀಣ್ ಮತ್ತು ಅವರ ಪತ್ನಿ ಸರಣ್ಯ ಹಾಗೂ ಅವರ ಮೂರು ಮಕ್ಕಳಾದ ಅರ್ಚ, ಶ್ರೀಭದ್ರ ಮತ್ತು ಅಭಿನವ್ ಎಂದು ಗುರುತಿಸಲಾಗಿದೆ. ಈ ಮ ಮೂವರು ಮಕ್ಕಳ ವಯಸ್ಸು ಬೇರೆಯಾದರೂ ಜನವರಿ ಒಂದೇ ತಿಂಗಳಲ್ಲಿ ಮೂವರು ಜನಿಸಿದ್ದರು. ಹೀಗಾಗಿ ಅವರ ಹುಟ್ಟುಹಬ್ಬ ಆಚರಿಸಲು ನೇಪಾಳ ಪ್ರವಾಸಕ್ಕೆ ತೆರಳಿದ್ದು, ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಜನವರಿ 3 ರಂದು ಶ್ರೀಭದ್ರ, 15 ರಂದು ಅಭಿನವ್ ಮತ್ತು 31ರಂದು ಅರ್ಚ ಹುಟ್ಟುಹಬ್ಬವಿತ್ತು. ಕೊನೆಯ ಮಗ ಅಭಿನವ್ ಎಲಮಕ್ಕರದಲ್ಲಿರುವ ಸರಸ್ವತಿ ವಿದ್ಯಾನಿಕೇತನದಲ್ಲಿ ಎಲ್ಕೆಜಿ ಓದುತ್ತಿದ್ದ. ಮಗಳು ಶ್ರೀಭದ್ರ ಕಳೆದ ಗುರುವಾರ ಶಾಲೆಯಿಂದ ಮನೆಗೆ ಮರಳಲು ತುಂಬಾ ಖುಷಿಯಾಗಿದ್ದಳು. ನಮ್ಮ ಡ್ಯಾಡಿ ಬಂದಿದ್ದಾರೆ. ನಾವು ನೇಪಾಳ ಪ್ರವಾಸಕ್ಕೆ ಹೋಗುತ್ತಿದ್ದೇವೆ. ಒಂದು ವಾರದ ಬಳಿಕ ಊರಿಗೆ ವಾಪಸ್ ಬರುತ್ತೇವೆ ಎಂದು ಹೇಳಿದ್ದಳು ಎನ್ನಲಾಗಿದೆ.
ಮಕ್ಕಳನ್ನು ಪ್ರತಿದಿನವು ಅವರ ತಾತ ಶಾಲೆ ಡ್ರಾಪ್ ಮಾಡುತ್ತಿದ್ದರು. ಆದರೆ ಕಳೆದ ಗುರುವಾರ ತಂದೆ ಪ್ರವೀಣ್ ತಾವೇ ಹೋಗಿ ಮಕ್ಕಳನ್ನು ಶಾಲೆಗೆ ಬಿಟ್ಟು, ಪ್ರವಾಸದ ಬಗ್ಗೆ ಶಿಕ್ಷಕರಿಗೆ ಹೇಳಿ ರಜೆ ಕೊಡಿ ಎಂದು ಮನವಿ ಮಾಡಿದ್ದಾರೆ. ಅದರಂತೆ ಮಕ್ಕಳನ್ನು ಕರೆದುಕೊಂಡು ಹುಟ್ಟುಹಬ್ಬದ ಸಂಭ್ರಮಾಚರಣೆಗೆ ನೇಪಾಳಕ್ಕೆ ಬಂದಿದ್ದರು. ಆದರೆ ನೇಪಾಳದ ಹೋಟೆಲ್ವೊಂದರಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. ರೂಮಿನೊಳಗೆ ಇಡಲಾಗಿದ್ದ ಔಟ್ಡೋರ್ ಹೀಟರ್ ನ ವಿಷಕಾರಿ ಕಾರ್ಬನ್ ಮೊನಾಕ್ಸೈಡ್ ಸೇವನೆಯಿಂದ ಈ ಕುಟುಂಬ ಸಾವನ್ನಪ್ಪಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಹೇಳಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.
