-ಒಟ್ಟಿಗೆ ಸಮಾಧಿ ಮಾಡಿ ಕಣ್ಣೀರಿಟ್ಟ ಪೋಷಕರು
ತಿರುವನಂತಪುರಂ: ಪರಸ್ಪರ ತಬ್ಬಿಕೊಂಡೇ ಮಲಗುತ್ತಿದ್ದ ಅಕ್ಕ-ತಂಗಿ ಭೂಕುಸಿತಕ್ಕೆ ಬಲಿಯಾದ ಮನಕಲಕುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ.
ಮಲಪ್ಪುರಂ ಜಿಲ್ಲೆಯ ನಿಲಾಂಬೂರು ಪಟ್ಟಣದಿಂದ 25 ಕಿ.ಮೀ ದೂರದಲ್ಲಿರುವ ಪುಟ್ಟ ಕವಲಪ್ಪರ ಗ್ರಾಮದ ಅನಘಾ (4) ಮತ್ತು ಅಲೀನಾ(8) ಮೃತ ಸಹೋದರಿಯರು. ಮುತಪ್ಪನ್ ಕುನ್ನು ಬೆಟ್ಟದಲ್ಲಿ ಗುರುವಾರ ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟಿದ್ದ ಸಹೋದರಿಯರ ಮೃತದೇಹವು ಸೋಮವಾರ ಸಿಕ್ಕಿದ್ದು, ಅಂದೇ ಇಬ್ಬರನ್ನು ಒಂದೇ ಜಾಗದಲ್ಲಿ ಸಮಾಧಿ ಮಾಡಿ ಪೋಷಕರು ಕಣ್ಣೀರಿಟ್ಟಿದ್ದಾರೆ.
ಪುಟ್ಟ ಕವಲಪ್ಪರ ಗ್ರಾಮದ ವಿಕ್ಟರ್ ಹಾಗೂ ಥಾಮಸ್ ಸಹೋದರರ ಮನೆಯು ಕವಲಪ್ಪರ ಗ್ರಾಮದ ಮುತಪ್ಪಂಕ್ ಬೆಟ್ಟದ ಅತ್ಯಂತ ಮೇಲ್ಭಾಗದಲ್ಲಿತ್ತು. ಈ ಇಬ್ಬರಲ್ಲಿ ಒಬ್ಬರು ಬಡಗಿ ಮತ್ತು ಮತ್ತೊಬ್ಬರು ಪೇಂಟಿಂಗ್ ಕೆಲಸ ಮಾಡಿ, ಜೀವನ ನಡೆಸುತ್ತಿದ್ದರು. ವಿಕ್ಟರ್ ಹಾಗೂ ಥಾಮಸ್ ಅವರಿಗೆ ಐವರು ಮಕ್ಕಳಿದ್ದು, ಪತ್ನಿಯರ ಜೊತೆಗೆ ಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಕಾಣಿಸಿಕೊಂಡ ಮಳೆ ಅವರ ಬದುಕನ್ನೇ ಕಿತ್ತುಕೊಂಡಿದೆ.
ವಿಕ್ಟರ್ ಹಾಗೂ ಥಾಮಸ್ ಅವರ ಮಕ್ಕಳಾದ ಅನಘಾ ಮತ್ತು ಅಲೀನಾ ಒಟ್ಟಾಗಿ ಇರುತ್ತಿದ್ದರು. ಮಲಗುವಾಗಲೂ ಅಷ್ಟೇ ಒಂದೇ ಚಾಪೆಯ ಮೇಲೆ ಪರಸ್ಪರ ತಬ್ಬಿಕೊಂಡು ಮಲಗುತ್ತಿದ್ದರು. ಆದರೆ ಗುರುವಾರ ರಾತ್ರಿ ಕವಲಪ್ಪರಾದ ಮುತಪ್ಪಂಕ್ ಬೆಟ್ಟದಲ್ಲಿ ಭೂಕುಸಿತ ಉಂಟಾಗಿ ಸುಮಾರು 40 ಮನೆಗಳು ನಾಶವಾದವು. ಈ ವೇಳೆ ವಿಕ್ಟೋರ್ ಹಾಗೂ ಥಾಮಸ್ ಅವರ ಮನೆ ಭೂಕುಸಿತಕ್ಕೆ ಒಳಗಾಗಿ ಮಣ್ಣಿನ ಅಡಿ ಸಿಲುಕ್ಕಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಅವರು ಪತ್ನಿಯರು ಹಾಗೂ ಮೂವರು ಮಕ್ಕಳನ್ನು ಕರೆದುಕೊಂಡು ಮನೆಯಿಂದ ಆಚೆಗೆ ಬಂದಿದ್ದರು. ಆದರೆ ಅನಘಾ ಮತ್ತು ಅಲೀನಾ ಮನೆಯಲ್ಲಿಯೇ ಉಳಿದಿದ್ದರಿಂದ ಮಣ್ಣಿನ ಅಡಿ ಸಿಕ್ಕು ಮೃತಪಟ್ಟಿದ್ದರು.
ಮನೆಯಿಂದ ಹೊರಗೆ ಬಂದಿದ್ದ ವಿಕ್ಟರ್ ಇಬ್ಬರು ಹುಡುಗಿಯರನ್ನು ಹುಡುಕಲು ಇತರರೊಂದಿಗೆ ಮರಳಿದ್ದರು. ಮನೆ ಸಂಪೂರ್ಣವಾಗಿ ನೆಲ ಸಮವಾಗಿತ್ತು. ಇದನ್ನು ನೋಡಿದ ಅವರು ಸುಮಾರು ಗಂಟೆಗಳ ಕಾಲ ಮಣ್ಣು ಅಗೆದರು. ಆದರೆ ಮಕ್ಕಳು ಸಿಗಲಿಲ್ಲ ಎಂದು ಕವಲಪ್ಪರ ನಿವಾಸಿ ಅಯ್ಯಪ್ಪನ್ ಹೇಳಿದ್ದಾರೆ.
ಮಲಪ್ಪುರಂ ಜಿಲ್ಲೆಯ ಭೂತಾನಂನ ಸೇಂಟ್ ಮೇರಿಸ್ ಚರ್ಚ್ ನಲ್ಲಿ ಸೋಮವಾರ ಜನಸಮೂಹ ಜಮಾಯಿಸಿತ್ತು. ಪೋಷಕರು ಕಣ್ಣೀರಿಡುತ್ತಾ ಅನಘಾ ಹಾಗೂ ಅಲೀನಾ ಮೃತ ದೇಹವನ್ನು ಪ್ರತ್ಯೇಕ ಪೆಟ್ಟಿಗೆಯಲ್ಲಿ ಇಟ್ಟು ಸಮಾಧಿ ಮಾಡಿದರು. ಈ ವೇಳೆ ಅಲ್ಲಿ ನೆರೆದಿದ್ದ ಜನರು ಪುಟ್ಟ ಮಕ್ಕಳನ್ನು ನೆನೆದು ಕಣ್ಣೀರಿಟ್ಟರು.
ಗುರುವಾರ ಸಂಭವಿಸಿದ ಗುಟ್ಟ ಕುಸಿತದಲ್ಲಿ ಸಾವನ್ನಪ್ಪಿದವರ ಪೈಕಿ ಇಬ್ಬರು ಬಾಲಕಿಯರು ಸೇರಿದಂತೆ 14 ಜನರ ಮೃತ ದೇಹಗಳು 55ಕ್ಕೂ ಹೆಚ್ಚು ಜನರ ಮೃತ ದೇಹಗಳು ಅವಶೇಷಗಳ ಅಡಿಯಲ್ಲಿವೆ ಎಂದು ಹೇಳಲಾಗುತ್ತಿದೆ.