ಕೊಚ್ಚಿ: ಕರ್ನಾಟಕ, ಗುಜರಾತ್, ಗೋವಾದಲ್ಲಿ ಶಾಸಕರ ಪಕ್ಷಾಂತರದಿಂದ ಆಘಾತಗೊಂಡಿರುವ ಕಾಂಗ್ರೆಸ್ಸಿಗೆ ಈಗ ಕೇರಳದಲ್ಲೂ ಬಿಗ್ ಶಾಕ್ ಸಿಗುವ ಸಾಧ್ಯತೆಯಿದೆ.
ಕೇರಳದ 6 ಕಾಂಗ್ರೆಸ್ ಸಂಸದರು ಮತ್ತು 3 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಎನ್ಡಿಎ ಮಿತ್ರಪಕ್ಷ ಕೆಜೆಎಸ್ಪಿ ನಾಯಕ ಪಿ.ಸಿ.ಜಾರ್ಜ್ ಹೇಳಿಕೆ ನೀಡಿ ದೇಶದಲ್ಲಿ ಸಂಚಲನ ಮೂಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇರಳದ 6 ಕಾಂಗ್ರೆಸ್ ಸಂಸದರು ಮತ್ತು 3 ಶಾಸಕರು ಬಿಜೆಪಿ ಹೈಕಮಾಂಡ್ ಜೊತೆ ಸಂಪರ್ಕದಲ್ಲಿದ್ದಾರೆ. ಈಗಾಗಲೇ ನಾಯಕರ ಜೊತೆ ಮಾತುಕತೆ ನಡೆದಿರುವ ಬಗ್ಗೆ ನನಗೆ ಮಾಹಿತಿ ಸಿಕ್ಕಿದ್ದು, ಶೀಘ್ರವೇ ಈ ನಾಯಕರು ಬಿಜೆಪಿ ಸೇರುವ ಸಾಧ್ಯತೆಯಿದೆ ಎಂದು ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳು ಈ ವಿಚಾರದ ಬಗ್ಗೆ ಮತ್ತಷ್ಟು ಪ್ರಶ್ನೆ ಕೇಳಿದಾಗ, ಶೀಘ್ರವೇ ಕೇರಳ ಕಾಂಗ್ರೆಸ್ನಿಂದ ಬಿಜೆಪಿ ಕಡೆಗೆ ಭಾರೀ ಹರಿವು ಸಂಭವಿಸಲಿದೆ ಎಂದಷ್ಟೇ ಹೇಳಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.
ಜಾರ್ಜ್ ಹೇಳಿಕೆಗೆ ಕೇರಳ ಕಾಂಗ್ರೆಸ್ ಉಪಾಧ್ಯಕ್ಷ ವಿಡಿ ಸತೀಶನ್ ಪ್ರತಿಕ್ರಿಯಿಸಿ, ಕೇರಳದ ಯಾವೊಬ್ಬ ಸಂಸದ, ಶಾಸಕ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ. ಮಾಧ್ಯಮಗಳ ಮುಂದೆ ಪ್ರಚಾರಕ್ಕೆ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.