ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಗೆಳತಿಗೆ ಅಪ್ಪುಗೆ ನೀಡಿ ಅಮಾನತುಗೊಂಡಿದ್ದ ವಿದ್ಯಾರ್ಥಿ ಸಿಬಿಎಸ್ಸಿ 12 ತರಗತಿಯ ಪರೀಕ್ಷೆಯಲ್ಲಿ 91.2% ಅಂಕ ಪಡೆದಿದ್ದಾನೆ.
ಈ ಕುರಿತು ಸ್ಥಳೀಯ ಮಾಧ್ಯಮದೊಂದಿಗೆ ಸಂತಸ ವ್ಯಕ್ತಪಡಿಸಿರುವ ವಿದ್ಯಾರ್ಥಿ ಪೋಷಕರು ಶಾಲೆಯ ಆಡಳಿತ ಮಂಡಳಿ ನಿರ್ಧಾರದಿಂದ ಸಾಕಷ್ಟು ಬೇಸರ ಉಂಟಾಗಿತ್ತು. ಆದರೆ ವಿದ್ಯಾರ್ಥಿಗಳ ಭವಿಷ್ಯದ ಕಾರಣ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. ಸದ್ಯ ತಮ್ಮ ಮಗ ಎಲ್ಲವನ್ನು ಬದಿಗೊತ್ತಿ ಉತ್ತಮ ಅಂಕ ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ಎದುರಿಸಿದ್ದ ಪರೀಕ್ಷೆಯಲ್ಲಿ ಆಂಗ್ಲಭಾಷೆಯಲ್ಲಿ 87, ಅರ್ಥಶಾಸ್ತ್ರದಲ್ಲಿ 99, ವ್ಯವಹಾರ ಅಧ್ಯಯನದಲ್ಲಿ 90, ಲೆಕ್ಕಶಾಸ್ತ್ರದಲ್ಲಿ 88, ಮನಃಶಾಸ್ತ್ರದಲ್ಲಿ 92 ಅಂಕಗಳನ್ನು ಗಳಿಸಿದ್ದಾನೆ.
ಏನಿದು ಪ್ರಕರಣ?
ಕಳೆದ ಡಿಸೆಂಬರ್ ಅವಧಿಯಲ್ಲಿ ಕೇರಳದ ಸೇಂಟ್ ಥಾಮಸ್ ಸೆಂಟ್ರಲ್ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ವಿದ್ಯಾರ್ಥಿ ತನ್ನ ಗೆಳತಿಯನ್ನು ಅಪ್ಪಿಕೊಂಡಿದ್ದ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿದ್ದಕ್ಕೆ ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಶಾಲೆ ಈ ನಿರ್ಣಯ ಕೈಗೊಂಡಿತ್ತು.
ಶಾಲೆಯ ನಿರ್ಧಾರದ ವಿರುದ್ಧ ವಿದ್ಯಾರ್ಥಿ ಫೋಷಕರು ಕೇರಳ ಹೈಕೋರ್ಟ್ ಹಾಗೂ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲು ಸಹ ಹತ್ತಿದ್ದರು. ಆದರೆ ನ್ಯಾಯಾಲಯ ಶಾಲೆಗೆ ಶಿಸ್ತು ನಿಯಮ ರೂಪಿಸುವ ಅಧಿಕಾರ ಇದೇ ಎಂದು ಅಭಿಪ್ರಾಯಪಟ್ಟು ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿತ್ತು. ಬಳಿಕ ಸಂಸದ ಶಶಿ ತರೂರ್ ಮಧ್ಯ ಪ್ರವೇಶದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದು ಕೊಳ್ಳಲು ಅವಕಾಶ ನೀಡಲಾಗಿತ್ತು.