ನಾಡಪ್ರಭು ಕೆಂಪೇಗೌಡ ಶೀರ್ಷಿಕೆಯ ಕುರಿತಂತೆ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ದಿನೇಶ್ ಬಾಬು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ (Dharmabeeru Nadaprabhu Kempegowda) ಚಿತ್ರಕ್ಕೆ ಅನುಮತಿ ನೀಡಬಾರದು ಎಂದು ಅವರು ಕೋರ್ಟಿಗೆ ಮೊರೆ ಹೋಗಿದ್ದರು. ಈ ಕುರಿತಂತೆ ಧರ್ಮಭೀರು ನಾಡಪ್ರಭು ಕೆಂಪೇಗೌಡ ಚಿತ್ರದ ನಿರ್ಮಾಪಕ ಕಿರಣ್ (Kiran), ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದು, ತಮ್ಮ ಪ್ಯಾನ್ ವರ್ಲ್ಡ್ ಸಿನಿಮಾ. ಅದು ಮೊದಲು ಇಂಗ್ಲಿಷ್ (English) , ನಂತರದಲ್ಲಿ ಕನ್ನಡ ಚಿತ್ರವಾಗಿ ಬರಲಿದೆ. ಯುಕೆಯಲ್ಲಿ ನಾವು ಟೈಟಲ್ ಸೇರಿದಂತೆ ಹಕ್ಕು ಸ್ವಾಮ್ಯವನ್ನು ಅಲ್ಲಿಯೇ ಮಾಡುತ್ತೇವೆ ಎಂದಿದ್ದಾರೆ.
ಏನಿದು ಪ್ರಕರಣ?
ನಾಡಪ್ರಭು ಕೆಂಪೇಗೌಡ ಶೀರ್ಷಿಕೆಯ ಹಕ್ಕುಸ್ವಾಮ್ಯ ಹೊಂದಿರುವ ಟಿ. ಎಸ್. ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬರಬೇಕಿರುವ, ಕೆಂಪೇಗೌಡರ ಪಾತ್ರಕ್ಕೆ ಡಾಲಿ ಧನಂಜಯ್ ಆಯ್ಕೆಯಾಗಿರುವ ಸಿನಿಮಾದ ಚಿತ್ರೀಕರಣದ ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ. ಈ ನಡುವೆಯೇ ಧರ್ಮಭೀರು ನಾಡಪ್ರಭು ಕೆಂಪೇಗೌಡ ಹೆಸರಿನಲ್ಲಿ ಸಿನಿಮಾವೊಂದು ಘೋಷಣೆ ಆಗಿತ್ತು. ಈ ಸಿನಿಮಾವನ್ನು ನಿಲ್ಲಿಸುವಂತೆ ನಾಗಾಭರಣ ಕೋರ್ಟ್ ಮೆಟ್ಟಿಲು ಏರಿದ್ದರು.
ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು (Court) ಮಧ್ಯಂತರ ಆದೇಶದ ಅನುಸಾರ, ನಿರ್ಮಾಪಕ ಕಿರಣ್ ತೋಟಂಬೈಲ್, ಚೇತನ್ ರಾಜ್, ಧರ್ಮೇಂದ್ರ ಕುಮಾರ್ ಅರೇಹಳ್ಳಿ ಮತ್ತು ದಿನೇಶ್ ಬಾಬೂ, ಅವರ ಉದ್ಯೋಗಿಗಳು, ಏಜೆಂಟರು, ಪಾಲುದಾರರು, ಸಹವರ್ತಿ, ಅಧಿಕಾರಿ, ಪ್ರತಿನಿಧಿ ಮತ್ತು ಅವರ ಪರವಾಗಿ ವರ್ತಿಸುವ ಇತರ ಎಲ್ಲ ವ್ಯಕ್ತಿಗಳ ವಿರುದ್ಧ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಶೀರ್ಷಿಕೆಯ ಚಲನಚಿತ್ರವನ್ನು ಅಥವಾ ಆ ವಿಷಯವನ್ನು ಹೊಂದಿರುವ ಯಾವುದೇ ಚಲನಚಿತ್ರವನ್ನು ನಿರ್ಮಾಣ, ಪ್ರಸಾರ, ಸಾರ್ವಜನಿಕರಿಗೆ ಸಂವಹನ, ಪುನರುತ್ಪಾದನೆ, ಧ್ವನಿಮುದ್ರಣ, ವಿತರಣೆ, ಪ್ರಸಾರ, ಜಾಹೀರಾತು, ನಿರ್ದೇಶನ ಅಥವಾ ಇತರ ಯಾವುದೇ ರೀತಿಯಲ್ಲಿ ಪ್ರಕಟಿಸುವುದನ್ನು ತಾತ್ಕಾಲಿಕವಾಗಿ ತಡೆಯಾಜ್ಞೆ ವಿಧಿಸಲಾಗಿದೆ.
ನಾಡಪ್ರಭು ಕೆಂಪೇಗೌಡ ಶೀರ್ಷಿಕೆಯ ಹಕ್ಕುಸ್ವಾಮ್ಯ ಹೊಂದಿರುವ ಈಶ್ವರ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಗಳಾದ ನಿರ್ಮಾಪಕರಾದ ಎಂ. ಎನ್. ಶಿವರುದ್ರಪ್ಪ ಮತ್ತು ರಾಹುಲ್ ಗುಂಡಾಲ, ನಿರ್ದೇಶಕ ಟಿ.ಎಸ್. ನಾಗಾಭರಣ, ಸಹಲೇಖಕಿ ಪ್ರತಿಭಾ ನಂದಕುಮಾರ್ ಇವರ “ನಾಡಪ್ರಭು ಕೆಂಪೇಗೌಡ” ಚಿತ್ರದ ಚಿತ್ರಕಥೆಯ ಟ್ರೇಡ್ಮಾರ್ಕ್, ಶೀರ್ಷಿಕೆ, ಬ್ರಾಂಡ್, ಪೂರ್ವಪ್ರತ್ಯಯ ಮತ್ತು ಪ್ರತ್ಯಯ ಸೇರಿಕೆ, ರಿಮೇಕ್, ಅಳವಡಿಕೆ ಕುರಿತ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಲ್ಲಂಘಿಸಿ ಯಾವುದೇ ರೀತಿಯಲ್ಲಿ ಪ್ರಸ್ತಾವಿತ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಲನಚಿತ್ರ ಕುರಿತ ನಿರ್ಮಾಣ, ನಿರ್ದೇಶನ, ಜಾಹೀರಾತು, ವಿತರಣೆ ಅಥವಾ ಸಾರ್ವಜನಿಕರಿಗೆ ಸಂವಹನಗಳನ್ನು ಮಾಡದಂತೆ ತಾತ್ಕಾಲಿಕವಾಗಿ ತಡೆಯಾಜ್ಞೆ ವಿಧಿಸಲಾಗಿದೆ.
ನಾಡಪ್ರಭು ಕೆಂಪೇಗೌಡ ಕುರಿತಂತೆ ಟಿ.ಎಸ್. ನಾಗಾಭರಣ ಮತ್ತು ನಿರ್ಮಾಪಕ ಎಂ ಎನ್ ಶಿವರುದ್ರಪ್ಪ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿ, ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬೆಂಗಳೂರು, ಇಲ್ಲಿ ದಾವೆ ಹೂಡಿದ್ದರು.