ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದ್ದ ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದ ತನಿಖಾ ವರದಿಯನ್ನು ಸರ್ಕಾರಕ್ಕೆ ನ್ಯಾ.ಕೆಂಪಣ್ಣ ಆಯೋಗ ಸಲ್ಲಿಸಿದೆ. ವರದಿಯಲ್ಲಿ ರಿಡೂಗೆ ಹೇಳಿದ್ದೆ ಅಂತ ಹೇಳುತ್ತಿರುವ ಸಿಎಂ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ಸಿಕ್ಕಿದೆ ಎನ್ನಲಾಗಿದೆ.
ಮೂರು ವರ್ಷಗಳ ಸುದೀರ್ಘ ತನಿಖೆ ನಡೆಸಿದ ನ್ಯಾ.ಕೆಂಪಣ್ಣ ಅವರು 9 ಸಂಪುಟಗಳ 1,861 ಪುಟಗಳ ವರದಿಯನ್ನ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಠಿಯಾಗೆ ಇವತ್ತು ಸಲ್ಲಿಸಿದರು. ಬಳಿಕ ಮಾತನಾಡಿದ ನ್ಯಾ. ಕೆಂಪಣ್ಣ, ಸರ್ಕಾರ ಡಿನೋಟಿಫೈ ಮಾಡಿಲ್ಲ. ಲೋಪ ಎಸಗಿಲ್ಲ ಅಂತ ಸಿಎಂಗೆ ಕ್ಲೀನ್ಚಿಟ್ ಕೊಟ್ರೂ ಕೆಳಹಂತದ ಅಧಿಕಾರಿಗಳಿಂದ ಲೋಪ ಆಗಿರೋದು ವರದಿಯಲ್ಲಿದೆ ಅಂತ ತಿಳಿದುಬಂದಿದೆ.
1030 ಪುಟಗಳ ಸಾಕ್ಷಿಗಳ ಹೇಳಿಕೆ, ವಿಚಾರಣೆ ವೇಳೆ ಬಂದ 85 ಅರ್ಜಿಗಳಲ್ಲಿ 43 ಅರ್ಜಿಗಳ ವಿಚಾರಣೆ ನಡೆದಿದೆ. ಬಿಡಿಎ ಪರವಾಗಿ 6 ಸಾಕ್ಷಿಗಳು ಇವೆ. ಅರ್ಜಿದಾರರಿಗೆ ಪರವಾಗಿ ಯಾವುದೇ ಸಾಕ್ಷಿಗಳು ಬಂದಿಲ್ಲ ಎಂದು ಹೇಳಿದರು.
ಹಾಗಿದ್ರೆ ಮುಂದೇನು..?
* ಪರಾಮರ್ಶೆಗಾಗಿ ವರದಿ ನಗರಾಭಿವೃದ್ಧಿಗೆ ಇಲಾಖೆಗೆ ಹೋಗುತ್ತೆ
* ಬಳಿಕ ವರದಿ ರಾಜ್ಯ ಸಚಿವ ಸಂಪುಟದ ಮುಂದೆ ಬರುತ್ತೆ
* ಸರ್ಕಾರ ವರದಿಯನ್ನ ಸ್ವೀಕರಿಸಬಹುದು, ತಿರಸ್ಕರಿಸಬಹುದು
* ಸಂಪುಟದ ಉಪ ಸಮಿತಿ ರಚಿಸಿ ವರದಿಯನ್ನ ಒಪ್ಪಿಸಬಹುದು
* ಅಧಿವೇಶನದಲ್ಲಿ ಸರ್ಕಾರ ವರದಿಯನ್ನು ಮಂಡಿಸಬಹುದು
* ನ್ಯಾ.ಕೆಂಪಣ್ಣ ಆಯೋಗ ಹೇಳಿದ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬಹುದು