ನವದೆಹಲಿ: ತೆಲಂಗಾಣದ ಮುಖ್ಯಮಂತ್ರಿ (Telangana CM) ಕೆ ಚಂದ್ರಶೇಖರ್ ರಾವ್ (KCR) ಅವರ ಪುತ್ರಿ ಮತ್ತು ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ ಕವಿತಾ (K Kavitha) ಅವರು ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ (Delhi Excise Policy Case) ಸಂಬಂಧಿಸಿದಂತೆ ವಿಚಾರಣೆಗೆ ಮಾರ್ಚ್ 11 ರಂದು ಜಾರಿ ನಿರ್ದೇಶನಾಲಯದ (ED) ಮುಂದೆ ಹಾಜರಾಗುವುದಾಗಿ ಘೋಷಿಸಿದ್ದಾರೆ.
ದೆಹಲಿ ಅಬಕಾರಿ ನೀತಿಯ ಅಕ್ರಮಗಳಿಗೆ ಸಂಬಂಧಿಸಿದಂತೆ ಮಾರ್ಚ್ 9 ರಂದು ದೆಹಲಿಯಲ್ಲಿ (Delhi) ಇಡಿ ಕಚೇರಿಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಆದರೆ ಕವಿತಾ ವಿಚಾರಣೆಗೆ ಹಾಜರಾಗಲು 1 ವಾರ ಅವಕಾಶ ಕೋರಿ ಇಡಿಗೆ ಮನವಿ ಸಲ್ಲಿಸಿದ್ದರು. ಆದರೆ ಇಡಿ ಈ ಮನವಿಯನ್ನು ತಿರಸ್ಕರಿಸಿತ್ತು. ಬಳಿಕ ಕವಿತಾ ಇಡಿಗೆ ಇನ್ನೊಂದು ಪತ್ರ ಬರೆದು ಮಾರ್ಚ್ 11ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ಕವಿತಾ ಅವರ ಕಚೇರಿಯಿಂದ ಈ ಕುರಿತು ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ನಾನು ಜವಾಬ್ದಾರಿಯುತ ಭಾರತೀಯ ನಾಗರಿಕಳಾಗಿದ್ದೇನೆ. ಈ ರಾಷ್ಟ್ರದ ಮಹಿಳೆಯಾಗಿ ಕಾನೂನಿನ ಅಡಿಯಲ್ಲಿ ಒದಗಿಸಲಾದ ಹಕ್ಕುಗಳಿಗೆ ಅನುಗುಣವಾಗಿ ನಡೆದುಕೊಳ್ಳಲಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪೋಷಕರೇ ಎಚ್ಚರ- ಮಕ್ಕಳಲ್ಲಿ ಹೆಚ್ಚಾಗ್ತಿದೆ ಆಡಿನೋ ವೈರಸ್..!
ವಿಚಾರಣೆಗೆ ಹಾಜರಾಗಲು ಇಡಿ ಇಷ್ಟು ಕಡಿಮೆ ಸಮಯವನ್ನು ಏಕೆ ನೀಡಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇಡಿ ತನಿಖೆಯ ಹಿಂದೆ ರಾಜಕೀಯ ಉದ್ದೇಶಗಳು ಇರುವುದು ಇದರಲ್ಲಿ ಕಾಣಿಸುತ್ತಿದೆ. ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ನಾನು ಮುಂದಿನ ವಾರದ ಕಾರ್ಯಕ್ರಮಗಳನ್ನು ಈಗಾಗಲೇ ನಿಗದಿಮಾಡಿಕೊಂಡಿದ್ದೇನೆ. ವಿಚಾರಣೆಗೆ ಕಾಲಾವಕಾಶ ಕೋರಿರುವುದನ್ನು ನಿರಾಕರಿಸುವುದರ ಹಿಂದೆ ರಾಜಕೀಯ ಪ್ರೇರಿತ ಕಾರಣಗಳಿವೆ ಎಂದು ಆರೋಪಿಸಿದ್ದಾರೆ.
ಆದರೂ ಈ ದೇಶದ ಕಾನೂನು ಪಾಲಿಸುವ ಜವಾಬ್ದಾರಿಯುತ ಪ್ರಜೆಯಾಗಿ ನಾನು ಮಾರ್ಚ್ 11ರಂದು ಇಡಿ ಕಚೇರಿಗೆ ಹಾಜರಾಗಲಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಬಿಎಸ್ವೈ ಹೇಳಿಕೆ ಬೆನ್ನಲ್ಲೇ ಆ್ಯಕ್ಟೀವ್ ಆದ ವಿ.ಸೋಮಣ್ಣ ಬೆಂಬಲಿಗರು