ಹಾವೇರಿ: ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕ್ರಮ ಆಗಲೇಬೇಕು ಎಂದು ಮಾಜಿ ಸ್ವೀಕರ್ ಕೆ.ಬಿ.ಕೋಳಿವಾಡ ಆಗ್ರಹಿಸಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ಬಿಟ್ ಕಾಯಿನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ಅನ್ನೋದು ದೊಡ್ಡ ಅಪರಾಧ. ನಾನಾಗಲಿ, ನನ್ನ ಮಗನಾಗಲಿ, ಸಿಎಂ ಆಗಲಿ ಅಥವಾ ಸಿಎಂ ಮಗನಾಗಲಿ ಪ್ರಕರಣದಲ್ಲಿ ಯಾರೇ ಇದ್ದರೂ ಅವರ ಮೇಲೆ ಕ್ರಮ ಆಗಲೇಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶ್ರೀಕಿಗೂ, ನನ್ನ ಮಗನಿಗೂ ಯಾವುದೇ ರೀತಿಯ ಸಂಬಂಧವಿಲ್ಲ: ರುದ್ರಪ್ಪ ಲಮಾಣಿ
ಇಲ್ಲಿ ಪಕ್ಷ ಯಾವುದು ಎಂಬುದು ಬರೋದಿಲ್ಲ. ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿಯಾಗಲಿ ಈ ಅಪರಾಧದಲ್ಲಿ ಯಾರೇ, ಎಷ್ಟು ದೊಡ್ಡ ನಾಯಕರೇ ಭಾಗಿಯಾಗಿದ್ರೂ ಅವರ ಮೇಲೆ ಕ್ರಮ ಆಗಬೇಕು. ಇದನ್ನ ಸರ್ಕಾರ ಏಕೆ ಮುಚ್ಚಿಡಬೇಕು. ಅದರಲ್ಲಿ ಯಾರೇ ಇದ್ದರೂ ಅದನ್ನ ಬಯಲಿಗೆ ಎಳೆಯಬೇಕು. ಸರ್ಕಾರ ಪ್ರಮಾಣಿಕವಾಗಿ ಕೆಲಸ ಮಾಡಿ ಸತ್ಯವನ್ನು ಬಯಲಿಗೆ ಎಳೆಯಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಿಯಾಂಕ್ ಖರ್ಗೆ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಆಧಾರವಿಲ್ಲದೆ ಮಾತನಾಡಲು ಸಾಧ್ಯವಿಲ್ಲ. ಅವರು ಹೇಳಿರೋದ್ರಲ್ಲಿ ಸತ್ಯಾಂಶ ಇರಬಹುದು. ಪೆಗಾಸಿಸ್ ಪ್ರಕರಣ ಕುರಿತಂತೆ ಕೇಂದ್ರ ಸರ್ಕಾರ ಇದನ್ನ ತನಿಖೆ ಮಾಡಬಾರದು ಎಂದು ಹೇಳಿತ್ತು. ರಾಷ್ಟ್ರೀಯ ಭದ್ರತೆ ನೆಪದಲ್ಲಿ ಕೇಂದ್ರ ಸರ್ಕಾರ ಹೀಗೆ ಹೇಳಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು
ಸುಪ್ರೀಂಕೋರ್ಟ್ ತೀರ್ಪು ಬಂದರೆ ಕೇಂದ್ರ ಸರ್ಕಾರವೇ ಬುಡಮೇಲು ಆಗುತ್ತದೆ. ಜೈಲಿಗೂ ಹೋಗಬೇಕಾಗುತ್ತದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗಂಭೀರವಾಗಿ ಆರೋಪಿಸಿದರು.