ಬಳ್ಳಾರಿ: ಪಕ್ಷದಿಂದ ಉಚ್ಛಾಟನೆ ಬೆನ್ನಲ್ಲೇ ವಿಜಯನಗರ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಬಿಜೆಪಿಗೆ ಸೆಡ್ಡು ಹೊಡೆದಿದ್ದು, ಪ್ರಣಾಳಿಕೆ ರಚಿಸಿ ಜನರನ್ನು ಸೆಳೆಯಲು ಮುಂದಾಗಿದ್ದಾರೆ.
ಜಿಲ್ಲೆಯ ಹೊಸಪೇಟೆಯಲ್ಲಿ ಗುರುವಾರ ಕವಿರಾಜ್ ಅರಸ್ 24 ಅಂಶಗಳುಳ್ಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಕ್ಷೇತ್ರದ ಅಭಿವೃದ್ಧಿಯ ಕುರಿತು ವಿವರಿಸಿದ್ದಾರೆ. ರಸ್ತೆ, ಚರಂಡಿ, ವಿವಿಧ ಅಭಿವೃದ್ಧಿ ಕಾರ್ಯ ಸೇರಿದಂತೆ ರೈತರ ಬಗ್ಗೆ ಕಾಳಜಿ ಇರುವ ಅಂಶಗಳನ್ನು ಸೇರ್ಪಡೆ ಮಾಡಿದ್ದಾರೆ.
ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಅವರು, ಉಚ್ಛಾಟನೆ ಮಾಡಲು ಪಕ್ಷದಿಂದ ನನಗೆ ಏನು ಮಾಡಿದ್ದರು? ವಿಧಾನ ಪರಿಷತ್ ಸದಸ್ಯ ಮಾಡಿದ್ರಾ, ಮಂತ್ರಿ ಮಾಡಿದ್ರಾ? ಉಚ್ಛಾಟನೆ ಅಂದರೆ ಏನರ್ಥ ಎಂದು ಪ್ರಶ್ನಿಸಿದರು.
ಉಪಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಗೆದ್ದ ಮೇಲೆ ಮಂತ್ರಿ ಮಾಡಿ ಎಂದು ಷರತ್ತು ವಿಧಿಸಿ ಬಿಜೆಪಿ ಸೇರುತ್ತೇನೆ. ನಾನು ಕೂಡ ಗಣಿ ಉದ್ಯಮಿ. ಆದರೆ ಹಣ, ಹೆಂಡ ಹಂಚುವುದಿಲ್ಲ. ಸಂಸದೆ ಸುಮಲತಾ ಅಂಬರೀಶ್ ಮಾದರಿಯಲ್ಲಿ ಗೆಲ್ಲುತ್ತೇನೆ. ಅದೇ ರೀತಿ ಪಕ್ಷೇತರರ ಅಭ್ಯರ್ಥಿಯಾಗಿದ್ದೇನೆ. ಬೇರೆ ಪಕ್ಷದ ನಾಯಕರು ಪರೋಕ್ಷವಾಗಿ ಬೆಂಬಲ ನೀಡುತ್ತಾರೆ. ವಿಜಯನಗರದಲ್ಲಿ ಮಂಡ್ಯ ಮಾದರಿ ಹೋರಾಟ ನಡೆಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜೀನಾಮೆ ಕೊಡಲು ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಯಾರು ಹೇಳಿದ್ರು? ಗೆದ್ದ ಮೇಲೆ ನಾಪತ್ತೆಯಾದರು. ಅವರು ದೊಡ್ಡ ಕಲಾವಿದ, ನಾಟಕಕಾರ. ಆದರೆ ಅವರನ್ನು ಮೀರಿಸುವ ಕಲಾವಿದ ನಾನು. ಆನಂದ್ ಸಿಂಗ್ ಮೇಲೆ 18 ಪ್ರಕರಣಗಳಿವೆ. ಇಷ್ಟೊಂದು ಪ್ರಕರಣ ಇರುವ ಅವರು ಗೆದ್ದ ಮೇಲೆ ಜೈಲು ಸೇರುತ್ತಾರೆ. ಆದರೆ ನನ್ನ ಮೇಲೆ ಒಂದೂ ಪ್ರಕರಣವಿಲ್ಲ. ನಾನು ವೈಟ್ ಕಾಲರ್ ಮನುಷ್ಯ ಎಂದು ವಾಗ್ದಾಳಿ ನಡೆಸಿದರು.