ಕಾರವಾರ: ಮದುವೆ ಎನ್ನುವುದು ಜೀವನದ ಪ್ರಮುಖ ಘಟನೆಯಲ್ಲಿ ಒಂದು. ಈ ವಿವಾಹವನ್ನು ವಾರ್ಷಿಕೋತ್ಸವನ್ನು ವಿಶೇಷವಾಗಿ ಮಾಡಿಕೊಳ್ಳಬೇಕು ಎಂದು ತೀರ್ಮಾನಿಸಿದ ದಂಪತಿ ಸಮುದ್ರದಾಳದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಮುರುಡೇಶ್ವರದ ಆರ್.ಎನ್.ಎಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಕೊಲ್ಲಾಪುರ ಮೂಲದ ಡಾ.ಚೇತನ್ ಮತ್ತು ದೀಪಿಕಾ.ಎಸ್ ರವರು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಮುರುಡೇಶ್ವರ ಸಮುದ್ರದಾಳದಲ್ಲಿ 35 ನಿಮಿಷ ಪರಸ್ಪರ ಹೂವುಗಳನ್ನು ನೀಡಿ ಮೀನುಗಳ ಜೊತೆ ಈಜಾಡಿ ಸಂಭ್ರಮಿಸಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ಇದಕ್ಕೆ ಮುರಡೇಶ್ವರದ ನೇತ್ರಾಣಿ ಅಡ್ವೇಂಚರ್ ಸಾಹಸ ಸಂಸ್ಥೆ ವೇದಿಕೆ ಒದಗಿಸಿತ್ತು.
ಮದುವೆಯಾದ ದಿನದ ಸವಿ ನೆನಪನ್ನು ಮರೆಯದ ರೀತಿ ನೆನಪಿರಬೇಕು ಎಂಬ ಹಂಬಲ ಹೊಂದಿದ್ದ ಈ ಜೋಡಿ ಆಯ್ಕೆ ಮಾಡಿಕೊಂಡಿದ್ದು ಸಮುದ್ರಾಳವನ್ನು. ಆದರೇ ಸಮುದ್ರದಾಳದಲ್ಲಿ ಇಳಿಯಲು ತಾಂತ್ರಿಕ ಪರಿಣಿತಿ ಬೇಕು. ಇವೆಲ್ಲದರ ನಡುವೆ ಹೆಚ್ಚು ಕಮ್ಮಿಯಾದರೂ ಪ್ರಾಣ ಪಕ್ಷಿ ಹಾರಿಹೋಗುವ ಭಯವೂ ಉಂಟು. ಹೀಗಾಗಿ ತಮ್ಮ ಈ ಬಯಕೆಯನ್ನು ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ಸಂಸ್ಥೆಯ ಗಣೇಶ್ ರವರ ಬಳಿ ಹಂಚಿಕೊಂಡಿದ್ದರು.
ದಂಪತಿಯ ಆಸೆಯನ್ನು ಈಡೇರಿಸಲು ಮುರುಡೇಶ್ವರದ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿರುವ ನೇತ್ರಾಣಿ ದ್ವೀಪಕ್ಕೆ ಕರೆದೊಯ್ದು ಆಕ್ಸಿಜನ್ ತುಂಬಿದ ಸಿಲಿಂಡರ್ ಅಳವಡಿಸಿ ಸಮುದ್ರದಾಳಕ್ಕೆ ಕರೆದೊಯ್ದರು. ಇಲ್ಲಿ ಒಬ್ಬರಿಗೊಬ್ಬರು ಹೂ ಗುಚ್ಚ ನೀಡುವ ಮೂಲಕ ಸಂತಸದ ಮದುರ ಕ್ಷಣದ ಶುಭಾಶಯ ವಿನಿಮಯ ಮಾಡಿಕೊಂಡರು. ನಂತರ 35 ನಿಮಿಷಕ್ಕೂ ಹೆಚ್ಚುಕಾಲ ಜೋಡಿಯಾಗಿ ಸಮುದ್ರದಾಳದಲ್ಲಿ ಮೀನುಗಳ ಜೊತೆ ಈಜಾಡಿ ಜೋಡಿ ಮೀನಿನಂತೆ ಸಂಚರಿಸಿ ಸಂತಸ ಪಟ್ಟು ಮದುರ ಗಳಿಗೆಯನ್ನು ಜೀವನದ ಮದುರ ಕ್ಷಣವಾಗಿ ದಾಖಲಿಸಿದರು.