ಕಾರವಾರ: ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ಪಡೆದುಕೊಂಡರೆ ದೇಶ ಉಳಿಯಲು ಸಾಧ್ಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಜಿಎಸ್ಟಿಯಿಂದಾಗಿ ದೇಶ ಸಂಕಷ್ಟದಲ್ಲಿದೆ. ಆದ್ದರಿಂದ ದೇಶದ ಆರ್ಥಿಕತೆಯನ್ನು ಮೇಲಕ್ಕೆತ್ತಲು ಮೋದಿ ಅವರು ಮನಮೋಹನ್ ಸಿಂಗ್ ಅವರ ಸಲಹೆ ಪಡೆಯಲಿ ಎಂದರು.
ಮೋದಿ ಅವರು ಶೋ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಮಾಧ್ಯಮದವರಿಗೂ ಮೋದಿ ಅವರನ್ನು ಕಂಡರೆ ಭಯ. ಹೀಗಾಗಿ ಮಾಧ್ಯಮಗಳಲ್ಲಿ ಮೋದಿ ವಿರುದ್ಧ ಸುದ್ದಿಗಳು ಪ್ರಸಾರವಾಗಲ್ಲ ಎಂದು ಮಾಧ್ಯಮಗಳ ಮೇಲೆ ಕಿಡಿಕಾರಿದರು. ಇದೇ ವೇಳೆ ಸಂಸದ ಅನಂತಕುಮಾರ ಹೆಗಡೆ ಅವರ ಬಗ್ಗೆ ಮಾತನಾಡಿದ ಅವರು, ಅವರು ಬೆಂಕಿ ಹಚ್ಚುವ ಕೆಲಸಮಾಡಿದ್ದರು. ಈ ಕಾರಣಕ್ಕೆ ಚುನಾವಣೆ ಗೆದ್ದ ಮೇಲೆ ಬಿಜೆಪಿಯವರೇ ಅವರನ್ನು ದೂರವಿಟ್ಟಿದ್ದಾರೆ ಎಂದು ತಿಳಿಸಿದರು.
ಇಂದು ಕೇಂದ್ರ ಆರ್ಥಿಕ ನೀತಿಯ ವಿರುದ್ಧ ಜನಾಂದೋಲನ ಹಾಗೂ ಕಾರ್ಯಕರ್ತರ ಸಮಾವೇಶಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂಡಗೋಡಿನ ತಾಲೂಕು ಕ್ರೀಡಾಂಗಣದಲ್ಲಿ ಚಾಲನೆ ನೀಡಿದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಹಾಗೂ ಪಕ್ಷ ಸಂಘಟನೆಯ ಮುಖ್ಯ ಉದ್ದೇಶವಿಟ್ಟುಕೊಂಡು ಈ ಭಾಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಸಿದ್ದರಾಮಯ್ಯನವರ ಆಗಮನದಿಂದ ಉಪ ಚುನಾವಣೆ ಕಣ ರಂಗೇರುವಂತೆ ಮಾಡಿದೆ. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್.ವಿ ದೇಶಪಾಂಡೆ, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ, ಎಸ್.ಆರ್.ಪಾಟೀಲ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.