ಕಾರವಾರ: ಪ್ರಧಾನ ಮಂತ್ರಿಯ ಮಾತಿನಂತೆ ಗ್ರಾಮ ಸ್ವಚ್ಛಗೊಳಿಸಿ ಮಕ್ಕಳು ಮಾದರಿಯಾಗಿದ್ದಾರೆ.
ಉತ್ತರಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಗಡಿ ಪ್ರದೇಶವಾದ ಹೆಗ್ಗಾರ ಗ್ರಾಮದ ಚಿಕ್ಕ ಮಕ್ಕಳು ದೇಶವೇ ಮೆಚ್ಚುವಂತ ಸಮಾಜ ಸ್ವಚ್ಛತಾ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡು ದೊಡ್ಡವರಿಗೆ ಮಾದರಿಯಾಗಿದ್ದಾರೆ. ಶಾಲೆಯ ಪುಟ್ಟ ಹುಡುಗರು ತಮ್ಮ ಊರಿನಲ್ಲಿ ಬಿದ್ದ ಕಸ ಹೆಕ್ಕಿ ಊರಿನ ಜನರಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ.
ಹೆಗ್ಗಾರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿ ತೇಜಸ್ವಿ ಗಾಂವ್ಕರ, ತನ್ನ ಸಹಪಾಠಿ ಸಂಕೇತ ಪಟಗಾರ, ದರ್ಶನ ಸಿದ್ದಿ, ವಿನಯ್ ಭಟ್ ಮಾದರಿಯಾದ ಮಕ್ಕಳು. ಗಂಗಾವಳಿ ನದಿ ಪ್ರವಾಹದಿಂದ ತೊಂದರೆಗೊಳಗಾಗಿದ್ದ ಈ ಗ್ರಾಮದಲ್ಲಿ ಬಿದ್ದ ಪ್ಲಾಸ್ಟಿಕ್ ಸೇರಿದಂತೆ ಕಸವನ್ನು ಬೀದಿಗಳಲ್ಲಿ ಹೆಕ್ಕಿ ಸ್ವಚ್ಛಗೊಳಿಸಿದ್ದಾರೆ. ಬೀದಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳನ್ನು ತಾವು ಮನೆಯಿಂದ ತಂದ ಚೀಲಗಳಲ್ಲಿ ತುಂಬಿದ್ದಾರೆ. ಸಹಪಾಠಿ ದರ್ಶನ್ ಸಿದ್ದಿಯ ಸೈಕಲ್ ನಲ್ಲಿ ಕಸದ ಬ್ಯಾಗ್ ಹೇರಿಕೊಂಡು ಬೀದಿಯ ಕೊನೆಯಲ್ಲಿ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಚೊಕ್ಕಗೊಳಿಸಿದ್ದಾರೆ.
ಇದನ್ನು ಕಂಡ ಊರಿನವರು ಆಶ್ಚರ್ಯಚಕಿತರಾಗಿ ಶಿಕ್ಷಕರೇನಾದರೂ ಈ ರೀತಿ ಅಸೈನ್ಮೆಂಟ್ ಕೊಟ್ಟಿರಬಹುದೇ? ಎಂದು ಪ್ರಶ್ನಿಸಿದರು. ಅದೇನೂ ಇಲ್ಲ, ನಾವು ಪ್ರಧಾನ ಮಂತ್ರಿಗಳ ಮಾತಿನಂತೆ ನಡೆಯುತ್ತಿದ್ದೇವೆ. ಸುಮಾರು ಎರಡು ಕಿಲೊ ಮೀಟರ್ ವ್ಯಾಪ್ತಿಯ ಬೀದಿ ಬದಿಯ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛಗೊಳಿಸಿದ್ದೇವೆ ಎಂದು ಸ್ವಚ್ಛತೆ ಮಾಡುತಿದ್ದವರ ಗುಂಪಿನಲ್ಲಿದ್ದ ಬಾಲಕ ತೇಜಸ್ವಿ ನುಡಿದಾಗ ಊರಿನ ಜನರು ಬೇರಗಾಗಿದ್ದಾರೆ.
ಮನೆಯಲ್ಲಿರುವ ಕಸವನ್ನು ಪ್ರತಿ ದಿನ ಮನೆಯ ಮುಂದೆ ನಗರಸಭೆ ಕಸದ ವಾಹನಕ್ಕೆ ಹಾಕಲ್ಲ. ಬೀದಿಯ ಮೂಲೆಯಲ್ಲಿ ಕಸ ಎಸೆದು ಬರುವ ಇಂದಿನ ದಿನದಲ್ಲಿ ನಮ್ಮ ಮನೆಮಾತ್ರ ಸ್ವಚ್ಛವಾಗಿದರೆ ಸಾಕು ಎಂದು ಅಂದುಕೊಳ್ಳುವವರೇ ಹೆಚ್ಚು. ಅಂತಹವರ ನಡುವೆ ಈ ಪುಟ್ಟ ಮಕ್ಕಳು ಮಾದರಿಯಾಗಿದ್ದಾರೆ.