ಕಾರವಾರ: ಇಂದು ಉತ್ತರ ಕರ್ನಾಟಕದ ಸೋದೆ ವಾಧಿರಾಜ ಮಠಕ್ಕೆ ಮಾಜಿ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭೇಟಿ ನೀಡಿದ್ದರು.
ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸೋಂದಾ ಊರಿನಲ್ಲಿರುವ ವಾಧಿರಾಜ ಮಠಕ್ಕೆ ತಮ್ಮ ಸ್ನೇಹಿತರೊಂದಿಗೆ ಆಗಮಿಸಿದ ಅಣ್ಣಾಮಲೈ ಸೋದೆ ಮಠದ ಶ್ರೀಗಳೊಂದಿಗೆ ಆಧ್ಯಾತ್ಮದ ಬಗ್ಗೆ ಚರ್ಚೆ ಮಾಡಿದರು.
ತಮ್ಮ ಏಳು ಜನ ಗೆಳಯರ ಜೊತೆ ಬಂದಿದ್ದ ಅಣ್ಣಾಮಲೈ ಅವರು ಶ್ರೀ ವಿಶ್ವ ವಲ್ಲಭತೀರ್ಥ ಶ್ರೀಪಾದರಿಂದ ಮಂತ್ರಾಕ್ಷತೆ ಪಡೆದರು. ಈ ವೇಳೆ ಮಠವೆಲ್ಲವನ್ನು ಸುತ್ತಾಡಿ ನೋಡಿದ ಅವರು ಮಠದಲ್ಲಿರುವ ಪುಟ್ಟ ಮಕ್ಕಳ ಜೊತೆ ಕೆಲ ಕಾಲ ಮಾತನಾಡಿದರು. ದೇವರ ಕಡೆ ಜಾಸ್ತಿ ಒಲವು ಇರುವ ಅಣ್ಣಾಮಲೈ ಇತ್ತೀಚಿಗೆ ಶಬರಿಮಲೆಗೆ ಹೋಗಿ ಬಂದಿದ್ದರು.
ಕರ್ನಾಟಕ ಸಿಂಗಂ ಎಂದೇ ಖ್ಯಾತಿಯಾಗಿದ್ದ ಅಣ್ಣಾಮಲೈ ಅವರು ತಮ್ಮ 9 ವರ್ಷದ ಐಪಿಎಸ್ ಹುದ್ದೆಗೆ ಇದೇ ವರ್ಷ ಜೂನ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು. ತಮಿಳುನಾಡಿನ ಕೊಯಮತ್ತೂರಿನವಾರದ ಅವರು, 2011ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು. ನಂತರ 2013ರಲ್ಲಿ ಕಾರ್ಕಳ ಎಎಸ್ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಅವರು, ಬಳಿಕ 2015ರಲ್ಲಿ ಉಡುಪಿ ಜಿಲ್ಲಾ ಎಸ್ಪಿ, ಚಿಕ್ಕಮಗಳೂರು ಎಸ್ಪಿಯಾಗಿ ದಕ್ಷ ಸೇವೆ ಮಾಡಿದ್ದಾರೆ.