ಚೆನ್ನೈ: ನಟ, ರಾಜಕಾರಣಿ ವಿಜಯ್ ರ್ಯಾಲಿ ವೇಳೆ ಭೀಕರ ಕಾಲ್ತುಳಿತಕ್ಕೆ ಬಲಿಯಾದವರ ಮೃತದೇಹಗಳು ಹಾಗೂ ಗಾಯಗೊಂಡವರನ್ನು ಕಂಡು ತಮಿಳುನಾಡು ಶಿಕ್ಷಣ ಸಚಿವ ಅಂಬಿಲ್ ಮಹೇಶ್ ಕಣ್ಣೀರಿಟ್ಟರು.
ಕರೂರಿನಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತಕ್ಕೆ 35ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಗಾಯಾಳುಗಳು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಗಳಲ್ಲಿ ಮೃತದೇಹಗಳ ಮುಂದೆ ಕುಟುಂಬಸ್ಥರು ಗೋಳಾಡಿದರು. ಗೋಳಾಟ, ಚೀರಾಟ ಕಂಡ ಸಚಿವರಿಗೆ ದುಃಖ ತಡೆಯಲಾಗಲಿಲ್ಲ. ಜನರನ್ನು ಸಂತೈಸಲು ಪ್ರಯತ್ನಿಸಿದರು. ಸಚಿವರ ಮುಂದೆ ತಮ್ಮವರನ್ನು ಕಳೆದುಕೊಂಡು ಜನರು ಕಣ್ಣೀರಿಟ್ಟರು.
ಸ್ಥಳದಲ್ಲಿ ಶೋಕ ಮಡುಗಟ್ಟಿತ್ತು. ಮೃತರ ಕುಟುಂಬಸ್ಥರ ನೋವು ಹಾಗೂ ಗಾಯಾಳುಗಳ ಪರಿಸ್ಥಿತಿ ಕಂಡು ಸಚಿವ ಅಂಬಿಲ್ ಅವರಿಗೆ ದುಃಖ ಉಮ್ಮಳಿಸಿ ಬಂತು. ಕಣ್ಣೀರು ತಡೆಯಲಾಗದೇ ಅತ್ತುಬಿಟ್ಟರು.
ದುರಂತಕ್ಕೆ ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರವನ್ನು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ.