ಹಾಸನ: ಮಹಾಮಳೆಗೆ ಹಾಸನ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ. ಮೃತರನ್ನು ರಂಗಮ್ಮ (60), ಪುಷ್ಪಾ(40) ಹಾಗೂ ಪ್ರಕಾಶ್(61) ಎಂದು ಗುರುತಿಸಲಾಗಿದೆ.
ಹಾಸನ ತಾಲೂಕಿನ ಕೌಶಿಕ ಗ್ರಾಮದಲ್ಲಿ ಆಗಸ್ಟ್ 9 ರಂದು ಮನೆ ಕುಸಿದಿತ್ತು. ಮನೆಯ ಅವಶೇಷಗಳಡಿ ರಂಗಮ್ಮ ಸಿಲುಕಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಗಸ್ಟ್ 9 ರಿಂದ ನಾಪತ್ತೆಯಾಗಿದ್ದ ಆಲೂರು ತಾಲೂಕಿನ ಮತ್ತೋರ್ವ ಮಹಿಳೆ ಪುಷ್ಪಾ, ಶಂಕುತೀರ್ಥ ನದಿಯ ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದರು. ನಿನ್ನೆ ನದಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಅವರ ಮೃತದಹ ಪತ್ತೆಯಾಗಿದೆ.
ಸಕಲೇಶಪುರ ತಾಲೂಕಿನ ಹುರಡಿಯ ಪ್ರಕಾಶ್ ಕೂಡ ಮೃತಪಟ್ಟಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಈವರೆಗೆ ಮೂವರು ಮಹಾಮಳೆಗೆ ಬಲಿಯಾಗಿದ್ದಾರೆ.