ವಿಜಯಪುರ: ಅಥಣಿ ರಣಕಣದಲ್ಲಿ ಮೇಲ್ನೋಟಕ್ಕೆ ಬಂಡಾಯದ ಬೇಗುದಿ ಮುಗಿದಿದ್ರೂ ಒಳಗೊಳಗೆ ಕುದಿಯುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಬೇಗುದಿ ಜಾಸ್ತಿ ಆಗುತ್ತಿದೆ. ಇದರ ಬೆನ್ನಲ್ಲೇ ಇಂದು ಬಿಎಸ್ವೈ ಅಥಣಿಗೆ ಆಗಮಿಸುತ್ತಿದ್ದಾರೆ.
ಅಥಣಿಯಲ್ಲಿ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಎದ್ದಿರೋ ಬಂಡಾಯ ಇನ್ನೂ ತಣ್ಣಗಾಗಲಿಲ್ಲ. ಬಿಜೆಪಿ ಮುಖಂಡರು ಅಸಮಾಧಾನ, ಬಂಡಾಯ ಶಮನಕ್ಕೆ ಪ್ರಯತ್ನಿಸಿದ್ರೂ ಏನೂ ವರ್ಕೌಟ್ ಆಗಿದ್ದಂತೆ ಕಾಣುತ್ತಿಲ್ಲ. ಟಿಕೆಟ್ ಕೈ ತಪ್ಪಿರೋ ಸವದಿಗೆ ಅಸಮಾಧಾನ ಮೇಲ್ನೋಟಕ್ಕೆ ತೋರಿಸದೇ ಇದ್ದರೂ ಒಳಗೊಳಗೆ ಇನ್ನು ಜ್ವಾಲೆಯಂತೆ ಉರಿಯುತ್ತಲೆ ಇದೆ.
ಅಥಣಿಯಲ್ಲಿ ಒಳಬೇಗುದಿ ಇನ್ನೂ ಮುಂದುವರಿದಿದ್ದು ಅದಕ್ಕಾಗಿಯೇ ಸವದಿ ಆಪ್ತರು, ಬೆಂಬಲಿಗರು ಒಂದಿಲ್ಲೊಂದು ಕ್ಯಾತೆ, ಬಂಡಾಯವನ್ನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಾಗಾಗಿ ಸಿಎಂಗೆ ಅಥಣಿ, ಕಾಗವಾಡ, ಗೋಕಾಕೇ ದೊಡ್ಡ ಸವಾಲಾಗಿತ್ತು. ಈಗ ಸ್ವತಃ ಸಿಎಂ ಯಡಿಯೂರಪ್ಪನವರೇ ಅಖಾಡಕ್ಕೆ ಇಳಿಯುತ್ತಿದ್ದು ಇಂದಿನಿಂದ ಅಥಣಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಸಿಎಂ ಬಿಎಸ್ವೈ ಬಿಜೆಪಿ ಕಾರ್ಯಕರ್ತರ ಸಭೆ ಕೂಡ ನಡೆಸಲಿದ್ದಾರೆ.
ಕುಮಟಳ್ಳಿಗೆ ಟಿಕೆಟ್ ಘೋಷಣೆ ಆದ ಮೇಲೆ ಇದೇ ಮೊದಲ ಬಾರಿಗೆ ಅಥಣಿಗೆ ಸಿಎಂ ಆಗಮಿಸುತ್ತಿದ್ದಾರೆ. ಈ ವೇಳೆ ಬಿಎಸ್ವೈ ಮುಂದೆ ಮತ್ತೆ ಸವದಿ ಬೆಂಬಲಿಗರು ಅಸಮಾಧಾನ ಹೊರಹಾಕೋ ಸಾಧ್ಯತೆ ಇದೆ. ಒಂದೆಡೆ ಸಿಎಂ ಬಿಎಸ್ವೈ ಸ್ವಾಗತಕ್ಕೆ ಮಹೇಶ್ ಕುಮಟಳ್ಳಿ ಹಾಗೂ ಟೀಮ್ ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಬಿಎಸ್ವೈಗೆ ಬಿಸಿ ತಟ್ಟಿಸಲು ಸವದಿ ಅಭಿಮಾನಿಗಳು ರೆಡಿ ಆಗಿರೋ ಮಾತುಗಳು ಕೇಳಿಬರುತ್ತಿದೆ.
ಇದರ ನಡುವೆ ತನಗೆ ಯಾವುದೇ ಅಸಮಾಧಾನ ಇಲ್ಲ. ಆದರೆ ಕಾರ್ಯಕರ್ತರಲ್ಲಿ ಸ್ವಲ್ಪ ಗೊಂದಲ ಇದೆ. ಅದನ್ನು ಸರಿ ಪಡಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ಹೋಗುತ್ತಿದ್ದೇವೆ ಅಂತ ಸವದಿ ಹೇಳಿದ್ದಾರೆ.
ಒಟ್ಟಿನಲ್ಲಿ ಇಂದು ಯಡಿಯೂರಪ್ಪ ನೇತೃತ್ವದಲ್ಲಿ ನಡೆಯೋ ಬಿಜೆಪಿ ಸಭೆ ಎಲ್ಲರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಲ್ಲದೆ ಈ ಎಲ್ಲಾ ಅಸಮಾಧಾನಗಳಿಗೆ ಸಿಎಂ ಹೇಗೆ ಇತಿಶ್ರೀ ಹಾಡ್ತಾರಾ ಅನ್ನೋದನ್ನ ಕಾದುನೋಡಬೇಕಾಗಿದೆ.