ಹವಾಮಾನ ಬದಲಾವಣೆಯಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಭಾರೀ ಕುಸಿತ ಕಂಡಿದೆ. ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ರಾಜ್ಯಕ್ಕೆ ಮಳೆ ಅವಾಂತರದ ಬಳಿಕ ಈಗ ಚಳಿಯ ಎಫೆಕ್ಟ್ ಶುರುವಾಗಿದೆ.
ಕಳೆದ ಎರಡು ದಿನಗಳಿಂದ ಧಿಡೀರ್ ಚಳಿ ಹೆಚ್ಚಾಗಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಸೃಷ್ಟಿಯಾಗಿರುವ ಹಿನ್ನೆಲೆ ಈಶಾನ್ಯ ಮಾರುತಗಳ ತಣ್ಣನೆಯ ಗಾಳಿ ದಕ್ಷಿಣ ಭಾರತದತ್ತ ಬೀಸುತ್ತಿರುವುದು ಚಳಿ ಹೆಚ್ಚಾಗಲು ಕಾರಣವಾಗಿದೆ. ಕಳೆದ 10 ವರ್ಷಗಳಲ್ಲಿ ಅಕ್ಟೋಬರ್ನಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಬೆಂಗಳೂರಿಗರು ಚಳಿ ಥಂಡಾ ಹೊಡೆಯುವಂತಾಗಿದೆ. ಧನುರ್ಮಾಸ ಆರಂಭಕ್ಕೂ ಮುನ್ನವೆ ಚಳಿಯ ಅಬ್ಬರ ಹೆಚ್ಚಾಗಿದ್ದು ಡಿಸೆಂಬರ್ ವೇಳೆಗೆ ಚಳಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 15.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಕಳೆದ ಹತ್ತು ವರ್ಷದಲ್ಲಿ ಅಕ್ಟೋಬರ್ ತಿಂಗಳಲ್ಲಿ ದಾಖಲಾದ ಕನಿಷ್ಠ ತಾಪಮಾನ ಇದಾಗಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ 2018ರ ಅಕ್ಟೋಬರ್ 30 ರಂದು 16.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 1974ರ ಅಕ್ಟೋಬರ್ 31 ರಂದು 13.2 ಡಿಗ್ರಿ ಸೆಲ್ಸಿಯಸ್ ವರದಿ ಆಗಿದ್ದು ಈವರೆಗಿನ ಕನಿಷ್ಠ ತಾಪಮಾನವಾಗಿದೆ. ಬೆಂಗಳೂರಿನಲ್ಲಿ ವಾಡಿಕೆಗಿಂತ 3.9 ಡಿಗ್ರಿ ಸೆಲ್ಸಿಯಸ್ ಕಡಿಮೆ ತಾಪಮಾನ ದಾಖಲಾಗಿದೆ. ಬೆಂಗಳೂರಿನ ಸುತ್ತಮುತ್ತಲಿನ ಹಲವು ಭಾಗಗಳಲ್ಲಿ 13 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನ ದಾಖಲಾಗಿರುವುದು ವರದಿಯಾಗಿದೆ.
ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿಯೂ ಇಳಿಕೆ ಕಂಡು ಬಂದಿದೆ. ರಾಜ್ಯದ ಶೇ.73ರಷ್ಟು ಭೂ ಭಾಗದಲ್ಲಿ 12 ಡಿಗ್ರಿ ಸೆಲ್ಸಿಯಸ್ನಿಂದ 16 ಡಿಗ್ರಿ ಸೆಲ್ಸಿಯಸ್ ತನಕ ಕನಿಷ್ಠ ತಾಪಮಾನ ದಾಖಲಾಗಿದೆ. ಕೋಲಾರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ರಾಮನಗರ, ತುಮಕೂರು, ಬೆಂಗಳೂರು ನಗರ, ಬೀದರ್, ವಿಜಯಪುರ, ಕಲಬುರಗಿ, ಮಂಡ್ಯ ಮತ್ತು ಕೊಡಗು ಜಿಲ್ಲೆಯ ಹಲವೆಡೆ ಕನಿಷ್ಠ ತಾಪಮಾನ 10.9 ಡಿಗ್ರಿ ಸೆಲ್ಸಿಯಸ್ನಿಂದ 13 ಡಿಗ್ರಿ ಸೆಲ್ಸಿಯಸ್ ತನಕ ಕುಸಿದಿದೆ. ವಿಜಯಪುರದಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ 7 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರ ಮಧ್ಯ ಆದರೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಮಂಡ್ಯ, ಮಡಿಕೇರಿ, ಮೈಸೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನದಲ್ಲಿ ತುಸು ಹೆಚ್ಚಳವಾಗಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 28-17
ಮಂಗಳೂರು: 32-23
ಶಿವಮೊಗ್ಗ: 31-17
ಬೆಳಗಾವಿ: 29-16
ಮೈಸೂರು: 29-17
ಮಂಡ್ಯ: 29-17
ಮಡಿಕೇರಿ: 27-13
ರಾಮನಗರ: 29-18
ಹಾಸನ: 28-16
ಚಾಮರಾಜನಗರ: 29-17
ಚಿಕ್ಕಬಳ್ಳಾಪುರ: 28-16
ಕೋಲಾರ: 28-17
ತುಮಕೂರು: 28-17
ಉಡುಪಿ: 32-22
ಕಾರವಾರ: 33-23
ಚಿಕ್ಕಮಗಳೂರು: 27-14
ದಾವಣಗೆರೆ: 30-18
ಚಿತ್ರದುರ್ಗ: 29-17
ಹಾವೇರಿ: 31-18
ಬಳ್ಳಾರಿ: 31-19
ಗದಗ: 30-18
ಕೊಪ್ಪಳ: 30-19
ರಾಯಚೂರು: 31-19
ಯಾದಗಿರಿ: 31-19
ವಿಜಯಪುರ: 30-17
ಬೀದರ್: 29-16
ಕಲಬುರಗಿ: 31-18
ಬಾಗಲಕೋಟೆ: 31-18