ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಾಹುಕಾರ ಅನ್ನೋ ಬೇಜಾನ್ ಸುದ್ದಿ ಮಾಡಿತ್ತು. ಅದೇ ಸಾಹುಕಾರ ಇವತ್ತು ವಿಧಾನಸಭೆಯಲ್ಲೂ ಎಲ್ಲರ ಗಮನ ಸೆಳೆದರು. ಡಿಕೆಶಿ ಎದುರು ಚಾಲೆಂಜ್ ಹಾಕಿ ಗೆದ್ದು ಬಂದ ರಮೇಶ್ ಜಾರಕಿಹೊಳಿಯತ್ತ ಬಹುತೇಕ ಶಾಸಕರ ಕಣ್ಣು. ಬಹಳಷ್ಟು ಶಾಸಕರು ಪಕ್ಷಬೇಧ ಮರೆತು ರಮೇಶ್ ಜಾರಕಿಹೊಳಿ ಬಳಿ ತೆರಳಿ ಕೈಕುಲುಕಿದ್ರು. ಅಷ್ಟೇ ಅಲ್ಲ ಲಕ್ಷ್ಮೀ ಹೆಬ್ಬಾಳ್ಕರ್ ಬಿಟ್ಟು ಬೆಳಗಾವಿಯ ಬಹುತೇಕ ಶಾಸಕರು ವಿಶ್ ಮಾಡಿದ್ರು. ಆದ್ರೆ ಸಾಹುಕಾರನ ಗೆಲುವಿನ ನಗು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಡೆ ತಲುಪಲೇ ಇಲ್ಲ.
ಅಂದಹಾಗೆ ವಿಧಾನಸಭೆಯಲ್ಲಿ ಇವತ್ತು ರಾಜ್ಯಪಾಲರ ಭಾಷಣದ ಬಳಿಕ ವಿರಾಮದ ವೇಳೆಯಲ್ಲಿ ಕೆಲವೊಂದು ಗಮನ ಸೆಳೆಯುವ ಘಟನೆಗಳು ನಡೆದವು. ಇದರಲ್ಲಿ ನೂತನ ಸಚಿವರ ನಡವಳಿಕೆಗಳ ಬಗ್ಗೆಯೇ ಹೆಚ್ಚು ಗಮನ ಹೋಗಿತ್ತು ಅಂದ್ರೂ ತಪ್ಪಾಗಲಾರದು. ಅದರಲ್ಲೂ ಸ್ಟಾರ್ ಆಫ್ ಆಟ್ರ್ಯಾಕ್ಷನ್ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ.
ವಿಧಾನಸಭೆ ಸಭಾಂಗಣದಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೊರಗೆ ಹೋದ ಮೇಲೆ ರಮೇಶ್ ಜಾರಕಿಹೊಳಿ ವಿರೋಧ ಪಕ್ಷದ ಕಡೆ ಬಂದ್ರು. ಸೀದಾ ಬಂದವರು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಪಕ್ಕ ಹೆಚ್ಡಿಕೆ ಸೀಟು ಖಾಲಿ ಇದ್ದ ಕಡೆ ಹೋಗಿ ಕುಳಿತ್ರು. ಸುಮಾರು ಎರಡ್ಮೂರು ನಿಮಿಷಗಳ ಕಾಲ ಮಾತನಾಡಿದ್ರು. ಆದ್ರೆ ಮೊದಲ ಸಾಲಿನಲ್ಲೇ ಕುಳಿತಿದ್ದ ತುಸು ಹತ್ತಿರವೇ ಇದ್ದ ಡಿಕೆಶಿ, ಸಿದ್ದರಾಮಯ್ಯ ಅವರನ್ನ ಕ್ಯಾರೇ ಅನ್ನಲಿಲ್ಲ ಸಾಹುಕಾರ. ಆ ಇಬ್ಬರು ನಾಯಕರ ಹತ್ತಿರ ಹೋಗಿ ವಿಶ್ ಕೂಡ ಮಾಡದೇ ತಮ್ಮ ಆಸನದತ್ತ ರಮೇಶ್ ಜಾರಕಿಹೊಳಿ ತೆರಳಿದ್ರು.
ಡಿಕೆಶಿ ಎದುರು ಚಾಲೆಂಜ್ ಹಾಕಿ ಗೆದ್ದ ಸಾಹುಕಾರ ಇನ್ನೂ ಸವಾಲಿನ ಗುದ್ದಾಟ ಮರೆತಿಲ್ಲವಾ ಅನ್ನೋ ಪ್ರಶ್ನೆ ಮೂಡುತ್ತೆ. ಇದರ ಜತೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕೂಡ ಸಿದ್ದರಾಮಯ್ಯ, ಡಿಕೆಶಿ, ಹೆಚ್ಡಿಕೆ ಅವರನ್ನ ಮಾತನಾಡಿಸಲು ಹೋಗಲೇ ಇಲ್ಲ. ಆನಂದ್ ಸಿಂಗ್, ಶ್ರೀಮಂತಪಾಟೀಲ್ ಕೂಡ ಯಾರನ್ನೂ ಮಾತನಾಡಿಸದೇ ಇದ್ದದ್ದು ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓಧಿ: ಸಿದ್ದರಾಮಯ್ಯ ಕಂಡ್ರೆ ಎಸ್.ಟಿ.ಸೋಮಶೇಖರ್ಗೆ ಕೋಪನಾ?