ಬೆಂಗಳೂರು: 5ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಗೆದ್ದ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.
ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (karnataka cricket Association) ಹಾಗೂ ಆಟಗಾರರ ಕುಟುಂಬಸ್ಥರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದ್ದಾರೆ. ಹೂಗುಚ್ಛ ನೀಡಿ, ಹಾರ ಹಾಕಿ ಬರಮಾಡಿಕೊಂಡಿದ್ದಾರೆ. ಏರ್ಪೋರ್ಟ್ನಿಂದ ಹೊರಬರುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: Champions | ವಿಜಯ್ ಹಜಾರೆ ಟ್ರೋಫಿ – 5ನೇ ಬಾರಿ ಕರ್ನಾಟಕ ಚಾಂಪಿಯನ್
ಇದಕ್ಕೂ ಮುನ್ನ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಕರ್ನಾಟಕ ತಂಡದ ಬ್ಯಾಟರ್ ಸ್ಮರಣ್ ರವಿಚಂದ್ರನ್ ಪೋಷಕರು ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದರು. ತಾಯಿ ಸುನಂದಾ, ತಂದೆ ರವಿಚಂದ್ರನ್ ಹಾಗೂ ಕೋಚ್ ಸಯ್ಯದ್ ಟ್ರೋಫಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು. ಇದನ್ನೂ ಓದಿ: Champions Trophy 2025 | ಟೀಂ ಇಂಡಿಯಾ ಪ್ರಕಟ – ರೋಹಿತ್ ಸಾರಥಿ, 15 ತಿಂಗಳ ಬಳಿಕ ಶಮಿ ಕಂಬ್ಯಾಕ್
ಕರ್ನಾಟಕ ಕಪ್ ಗೆದ್ದಿರೋದು ಖುಷಿ ಇದೆ. ನನ್ನ ಮಗ ಶತಕ ಸಿಡಿಸಿದ್ದು, ಒಂದು ಖುಷಿಯಾದ್ರೆ, ತಂಡ ಕಪ್ ಗೆದ್ದಿರೋದು ಡಬಲ್ ಖುಷಿ ಇದೆ. ತನ್ನ ಮಗ ತುಂಬಾ ಶ್ರಮ ಪಟ್ಟಿದ್ದಾನೆ. ಫೈನಲ್ ಮ್ಯಾಚ್ ಗೆದ್ದ ಮೇಲೆ ಕಪ್ ಗೆದ್ದಿದ್ದೇವೆ ಅಂತಾ ಕಾಲ್ ಮಾಡಿ ಮಾತನಾಡಿದ. ಆ ಕ್ಷಣ ತುಂಬಾ ಖುಷಿ ಕೊಟ್ಟಿತು ಎಂದು ಹೇಳಿಕೊಂಡಿದ್ದಾರೆ.
ವಡೋದರಾದ ಕೊಟಾಂಬಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಮಯಾಂಕ್ ಅಗರ್ವಾಲ್ ನೇತೃತ್ವದ ಕರ್ನಾಟಕ ತಂಡ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿತ್ತು. 349 ರನ್ಗಳ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಕರುಣ್ ನಾಯರ್ ನೇತೃತ್ವದ ವಿದರ್ಭ ತಂಡ 48.2 ಓವರ್ಗಳಲ್ಲಿ 312 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತ್ತು. ಇದನ್ನೂ ಓದಿ: ಎಸ್ಪಿ ಸಂಸದೆಯ ಜೊತೆ ಕ್ರಿಕೆಟಿಗ ರಿಂಕು ಸಿಂಗ್ ಎಂಗೇಜ್, ಶೀಘ್ರವೇ ಮದ್ವೆ
ಕರ್ನಾಟಕ ತಂಡ (Karnataka Team) 2013-14ರಲ್ಲಿ ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಗೆದ್ದುಕೊಂಡಿತ್ತು. ಆ ನಂತರ 2014-15, 2017-18 ಹಾಗೂ 2019-20ರಲ್ಲಿ ಪ್ರಶಸ್ತಿ ಗೆದ್ದಿತ್ತು. ಇದೀಗ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಫೈನಲ್ ತಲುಪಿದ್ದ ಕರ್ನಾಟಕ ತಂಡ 5ನೇ ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದೆ.