ಬೆಂಗಳೂರು: 2017ನೇ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ನಟಿ ಪ್ರಶಸ್ತಿಗೆ `ಹೆಬ್ಬೆಟ್ಟು ರಾಮಕ್ಕ’ ಚಿತ್ರದ ನಟನೆಗೆ ತಾರಾ ಅನುರಾಧ, ಅತ್ಯುತ್ತಮ ನಟರಿಗೆ ನೀಡಿರುವ ಸುಬ್ಬಯ್ಯ ನಾಯ್ಡು ಪ್ರಶಸ್ತಿಗೆ `ಮಂಜರಿ’ ಚಿತ್ರದ ವಿಶೃತ್ ನಾಯ್ಕ್ ಆಯ್ಕೆ ಆಗಿದ್ದಾರೆ.
ಚಲನಚಿತ್ರ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡುತ್ತಿದ್ದು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎನ್.ಎಸ್ ಶಂಕರ್ ಅಧ್ಯಕ್ಷತೆ ವಹಿಸಿದ್ದ ಸಮಿತಿಯು 2017 ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳ ಶಿಫಾರಸು ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿತ್ತು. ಸಮಿತಿ ಕಳುಹಿಸಿದ ಪಟ್ಟಿಯನ್ನು ಸರ್ಕಾರ ಅಂತಿಮಗೊಳಿಸಿದೆ.
- Advertisement 2
- Advertisement 3
ಮೊದಲ ಮೂರು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಕ್ರಮವಾಗಿ `ಶುದ್ದಿ’, `ಮಾರ್ಚ್ 22′, `ಪಡ್ಡಾಯಿ (ತುಳು)’ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ವಿಶೇಷ ಸಾಮಾಜಿಕ ಕಾಳಜಿ ಚಿತ್ರ ಪ್ರಶಸ್ತಿಗೆ `ಹೆಬ್ಬೆಟ್ಟು ರಾಮಕ್ಕ’, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ `ರಾಜಕುಮಾರ’ ಹಾಗೂ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ `ಎಳೆಯರು ನಾವು ಗೆಳೆಯರು’ ಸಿನಿಮಾಗಳು ಆಯ್ಕೆ ಆಗಿದೆ.
- Advertisement 4
ಉಳಿದಂತೆ ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ `ಅಯನ’, ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಗೆ ಕೊಂಕಣಿಯ `ಸೋಫಿಯಾ’ ಆಯ್ಕೆ ಆಗಿದೆ. ಅತ್ಯುತ್ತಮ ಪೋಷಕ ನಟರಿಗೆ ನೀಡುವ ಕೆಎಸ್ ಅಶ್ವಥ್ ಪ್ರಶಸ್ತಿಗೆ `ಲಕ್ಷ್ಮೀನಾರಾಯಣರ ಪ್ರಪಂಚಾನೇ ಬೇರೆ’ ಸಿನಿಮಾದಲ್ಲಿ ನಟಿಸಿದ್ದ ಮುಂಜುನಾಥ ಹೆಗಡೆ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಗೆ `ಮೂಕ ನಾಯಕ’ ಚಿತ್ರದಿಂದ ರೇಖಾ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಪೋಷಕ ನಟ, ನಟಿ ಪ್ರಶಸ್ತಿ 20 ಸಾವಿರ ರೂ. ನಗದು ಹಾಗೂ ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ.
ಅತ್ಯುತ್ತಮ ಕಥೆ ಪ್ರಶಸ್ತಿಗೆ `ಕೆಂಗುಲಾಬಿ’ ಹನುಮಂತ ಬಿ ಹಾಲಿಗೇರಿ ಹಾಗೂ `ನೀರು ತಂದವರು’ ಸಿನಿಮಾದ ಅಮರೇಶ ನುಗಡೋಣಿ ಅವರು ಆಯ್ಕೆ ಆಗಿದ್ದಾರೆ. ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿಗೆ ವೆಂಕಟ್ ಭಾರದ್ವಾಜ್ (ಚಿತ್ರ-ಕೆಂಪಿರ್ವೆ), ಅತ್ಯುತ್ತಮ ಸಂಭಾಷಣೆಗೆ ಪ್ರೊ.ಎಸ್.ಜಿ ಸಿದ್ದರಾಮಯ್ಯ (ಚಿತ್ರ-ಹೆಬ್ಬೆಟ್ಟು ರಾಮಕ್ಕ), ಅತ್ಯುತ್ತಮ ಛಾಯಾಗ್ರಾಹಣ ಪ್ರಶಸ್ತಿಗೆ ಸಂತೋಷ್ ರೈ ಪಾತಾಜೆ (ಚಿತ್ರ-ಚಮಕ್), ಅತ್ಯುತ್ತಮ ಸಂಕಲನ ಪ್ರಶಸ್ತಿಗೆ ಹರೀಶ್ ಕೊಮ್ಮೆ (ಮಫ್ತಿ) ಅವರಿಗೆ ನೀಡಲಾಗಿದೆ.
ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಪುನೀತ್ ರಾಜ್ ಕುಮಾರ್ ಅಭಿನಯದ `ರಾಜಕುಮಾರ’ ಚಿತ್ರದ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಅತ್ಯುತ್ತಮ ಬಾಲನಟ ಪ್ರಶಸ್ತಿಗೆ `ರಾಮರಾಜ್ಯದ’ ಚಿತ್ರದಲ್ಲಿ ನಟಿಸಿದ್ದ ಮಾಸ್ಟರ್ ಕಾರ್ತಿಕ್, ಬಾಲ ನಟಿ ಪ್ರಶಸ್ತಿಗೆ `ಕಟಕ’ ಸಿನಿಮಾದ ಶ್ಲಘ ಸಾಲಿಗ್ರಾಮ ಆಯ್ಕೆ ಆಗಿದ್ದಾರೆ.
ಅತ್ಯುತ್ತಮ ಕಲಾ ನಿರ್ದೇಶನ ಪ್ರಶಸ್ತಿ `ಹೆಬ್ಬುಲಿ’ ಚಿತ್ರದ ಎಸ್.ಎ ರವಿ, ಗೀತ ರಚನೆ ಪ್ರಶಸ್ತಿಗೆ `ಮಾರ್ಚ್ 22′ ಚಿತ್ರದ ಜೆ.ಎಂ ಪ್ರಹ್ಲಾದ್, ಹಿನ್ನೆಲೆ ಗಾಯಕ `ಹುಲಿರಾಯ’ ಸಿನಿಮಾಗಾಗಿ ತೇಜಸ್ವಿ ಹರಿದಾಸ್, ಗಾಯಕಿಯಾಗಿ `ದಯವಿಟ್ಟು ಗಮನಿಸಿ’ ಚಿತ್ರದ ಅಪೂರ್ವ ಶ್ರೀಧರ್ ಅವರಿಗೆ ನೀಡಲಾಗಿದೆ.
ತೀರ್ಪುಗಾರರ ವಿಶೇಷ ಪ್ರಶಸ್ತಿಗೆ `ಮಹಾಕಾವ್ಯ’ ಸಿನಿಮಾ ಶ್ರೀದರ್ಶನ್, ರಾಗ ಸಿನಿಮಾದ ಮಿತ್ರ ಹಾಗೂ ಅತ್ಯುತ್ತಮ ನಿರ್ಮಾಣ ನಿರ್ವಾಹಕರಾಗಿ ಹೆಬ್ಬುಲಿ ಚಿತ್ರದ ಸುರೇಶ್ ಪ್ರಶಸ್ತಿ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv