ಬಾಗಲಕೋಟೆ: ಬೈಕ್ ಅಪಘಾತದಲ್ಲಿ ಭಾರತೀಯ ವಾಯುಸೇನೆಯ ಯೋಧರೊಬ್ಬರು ಮೃತಪಟ್ಟ ಘಟನೆ ಚಂಡಿಗಢದ ಅಂಬಾಲಾ ಪ್ರದೇಶದ ಬಳಿ ಇಂದು ನಡೆದಿದೆ.
ಜಿಲ್ಲೆಯ ಬೀಳಗಿ ತಾಲೂಕಿನ ತೆಗ್ಗಿ ಗ್ರಾಮದ ಪಾಂಡು ಲಮಾಣಿ(25) ಮೃತ ಯೋಧ. ಕಳೆದ ಆರು ವರ್ಷದಿಂದ ಭಾರತೀಯ ವಾಯುಸೇನೆಯಲ್ಲಿ ಏರ್ ಮನ್ ಆಗಿ ಪಾಂಡು ಸೇವೆ ಸಲ್ಲಿಸುತ್ತಿದ್ದರು. ಪ್ರಸ್ತುತವಾಗಿ ಚಂಡಿಗಢದ ಅಂಬಾಲದ ವಾಯುನೆಲೆ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ ಕರ್ತವ್ಯಕ್ಕೆ ಹೊರಡುವಾಗ ನಡೆದ ರಸ್ತೆ ಅಪಘಾತದಲ್ಲಿ ಪಾಂಡು ಮೃತಪಟ್ಟಿದ್ದಾರೆ.
ಈ ಬಗ್ಗೆ ಮಧ್ಯಾಹ್ನದ ಹೊತ್ತಿಗೆ ಕುಟುಂಬಸ್ಥರಿಗೆ ವಿಷಯ ತಿಳಿದಿದ್ದು, ಮನೆಮಂದಿ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪಾಂಡು ಅವರ ಮೃತದೇಹವನ್ನು ಸ್ವಗ್ರಾಮಕ್ಕೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಚಂಡಿಗಢ ವಾಯುಸೇನೆ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.