ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭೆ ಚುನಾವಣೆ ಮುಗಿದು ಫಲಿತಾಂಶವೂ ಹೊರಬಿದ್ದಿದೆ. ನಿರೀಕ್ಷೆಯಂತೆ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಒಂದು ಸ್ಥಾನಕ್ಕೆ ತೃಪ್ತಿಪಟ್ಟಿದೆ. ಜೆಡಿಎಸ್ ಶೂನ್ಯ ಸಂಪಾದನೆ ಮಾಡಿ ಹಿನ್ನಡೆ ಅನುಭವಿಸಿದೆ.
ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪ್ರತಿಷ್ಠೆಯ ಸಮರದಲ್ಲಿ ಅಗತ್ಯ ಸಂಖ್ಯಾಬಲ ಇಲ್ಲದಿದ್ರೂ, ನಾಲ್ಕನೇ ಸ್ಥಾನವನ್ನು ಬಿಜೆಪಿ ರಾಜಕೀಯದಾಟದ ಮೂಲಕ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಬಿಜೆಪಿಯ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್, ಕಾಂಗ್ರೆಸ್ನ ಜೈರಾಮ್ ರಮೇಶ್ ಮೊದಲ ಪ್ರಾಶಸ್ತ್ಯದ ಮತಗಳಿಂದ, ಬಿಜೆಪಿ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಮೊದಲ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳಿಂದ ಸುಲಭ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಕ್ರಮಕ್ಕೆ ಆಗ್ರಹಿಸಿ ದೇಶಾದ್ಯಂತ ಮುಸ್ಲಿಮರ ಪ್ರತಿಭಟನೆ, ಬುರ್ಕಾ ಧರಿಸಿ ಬೀದಿಗಿಳಿದ ಮಹಿಳೆಯರು
ಜೆಡಿಎಸ್ ಮಣಿಸುವ ಹಠಕ್ಕೆ ಬಿದ್ದು ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮನ್ಸೂರ್ ಖಾನ್ ಗೆಲ್ಲಿಸಿಕೊಳ್ಳಲಾಗದೇ ಮುಖಭಂಗ ಅನುಭಸಿದ್ದರೂ ಕೂಡ ತಮ್ಮ ಗೇಮ್ ಪ್ಲಾನ್ ಮೂಲಕ ರಾಜಕೀಯ ಚದುರಂಗದಾಟದಲ್ಲಿ ಮೇಲುಗೈ ಸಾಧಿಸಿದ್ದಾರೆ. ಚುನಾವಣೆಗೂ ಮುನ್ನ ಆತ್ಮಸಾಕ್ಷಿ ಅಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ ಒಂದರ್ಥದಲ್ಲಿ ಗೆದ್ದು ಬೀಗಿದ್ದಾರೆ. ಇದನ್ನೂ ಓದಿ: ರೇವಣ್ಣಗೆ ಕ್ಲೀನ್ ಚಿಟ್ ಕೊಟ್ಟ ಚುನಾವಣಾ ಆಯೋಗ
ಕಾಂಗ್ರೆಸ್ಸಿನ ಎರಡನೇ ಅಭ್ಯರ್ಥಿ ಮನ್ಸೂರ್ ಖಾನ್ ಗೆಲ್ಲದಿದ್ದರೂ, ಜೆಡಿಎಸ್ ಮತಗಳನ್ನು ವಿಭಜನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನೆಲ್ಲ ಮತಗಳನ್ನು ಉಳಿಸಿಕೊಂಡಿದೆ. ಹೆಚ್ಚುವರಿ ಮತಗಳು ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ, ಜೆಡಿಎಸ್ನಿಂದ ಅಮಾನತಾದ ಶಾಸಕ ಶ್ರೀನಿವಾಸಗೌಡ ರೂಪದಲ್ಲಿ ಬಂದಿದೆ. ಆದ್ರೆ, ಎರಡನೇ ಅಭ್ಯರ್ಥಿಯನ್ನು ಮಾತ್ರ ಕಾಂಗ್ರೆಸ್ಗೆ ಗೆಲ್ಲಿಸಿಕೊಳ್ಳಲು ಆಗಲಿಲ್ಲ.