ಬೆಂಗಳೂರು: ರಾಜ್ಯದ ಹಲವೆಡೆ ಭೀಕರ ಮಳೆಯಾಗುತ್ತಿದ್ದು, ಅಪಾರ ಬೆಳೆ ಹಾನಿ ಸಾವು ನೋವುಗಳು ಸಂಭವಿಸಿವೆ.
ಈ ಮಳೆಯಿಂದಾಗಿ ಕರ್ನಾಟಕದ ಬಹುತೇಕ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಗುಡ್ಡಗಳು ಕುಸಿದು ಹೆದ್ದಾರಿಗಳು ಬಂದ್ ಆಗಿವೆ. ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ಈ ಮಹಾಮಳೆಗೆ 16 ಮಂದಿ ಸಾವನ್ನಪ್ಪಿದ್ದಾರೆ. 205 ಜಾನುವಾರುಗಳು ಮೃತಪಟ್ಟಿವೆ. 68 ತಾಲೂಕುಗಳಿಗೆ ಹಾನಿ ಆಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಮಳೆಯಿಂದ ಉಂಟಾದ ಪ್ರವಾಹಕ್ಕೆ 874 ಹಳ್ಳಿಗಳು ಸಂಪೂರ್ಣ ಜಲಾವೃತವಾಗಿವೆ. ಸುಮಾರು 2,07,212 ಜನರನ್ನು ಸ್ಥಳಾಂತರ ಮಾಡಲಾಗಿದೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಜನರಿಗೆ ಸಹಾಯವಾಗಲಿ ಎಂದು 576 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ 1,41,683 ಜನ ಆಶ್ರಯ ಪಡೆದಿದ್ದಾರೆ. ಈ ಪ್ರವಾಹದಿಂದ ಸುಮಾರು 2,59,753 ಎಕ್ರೆ ಬೆಳೆ ನಾಶವಾಗಿದೆ.
ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡ 44,002 ಸಾವಿರ ಪ್ರಾಣಿಗಳನ್ನು ರಕ್ಷಣೆ ಮಾಡಲಾಗಿದೆ. ಈ ಪ್ರಾಣಿಗಳ ಪೈಕಿ 26,750 ಪ್ರಾಣಿಗಳಿಗೆ ಕ್ಯಾಪ್ಗಳಲ್ಲಿ ಆಶ್ರಯ ನೀಡಲಾಗಿದೆ. ಈ ಮಹಾಮಳೆಗೆ 11,879 ಮನೆಗಳು ನೆಲಸಮವಾಗಿದೆ.