ಬೆಂಗಳೂರು: ರಾಜ್ಯದ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ ಕರುಣಿಸಿದೆ ಎಂದು ಆರೋಪಿಸಿ ವಿಪಕ್ಷ ನಾಯಕರು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಮತ್ತು ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಈ ವಿನೂತನ ಮಾದರಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಆರ್.ಅಶೋಕ್ ಅವರು ‘ಸಿದ್ದು ಸರ್ಕಾರದಲ್ಲಿ ಅಧಿಕಾರಿಗಳಿಗೆ ಆತ್ಮಹತ್ಯೆ ಭಾಗ್ಯ’ ಎಂಬ ಘೋಷಣೆಯುಳ್ಳ ಭಿತ್ತಿಪತ್ರ ಹಿಡಿದಿದ್ದರು. ಛಲವಾದಿ ನಾರಾಯಣಸ್ವಾಮಿ ಅವರು ‘ನಿಷ್ಠಾವಂತ ಅಧಿಕಾರಿಗಳಿಗೆ ರಕ್ಷಣೆ ಕೊಡಿ’ ಎಂಬ ಭಿತ್ತಿಪತ್ರ ಹಿಡಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
- Advertisement 2-
ಈ ವೇಳೆ ಮಾತನಾಡಿದ ಅಶೋಕ್, ನಿಷ್ಠಾವಂತ ಅಧಿಕಾರಿಗಳು ಕೆಲಸ ಮಾಡಲು ಆಗದ ಪರಿಸ್ಥಿತಿ ಇದೆ. ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಬ್ ಇನ್ಸ್ಪೆಕ್ಟರ್ ಒಬ್ಬರು ಪ್ರಾಣ ಕಳಕೊಂಡಿದ್ದಾರೆ. ನಿರಂತರವಾಗಿ ಸರಣಿ ರೀತಿ ಆತ್ಮಹತ್ಯೆ ನಡೆಯುತ್ತಿದೆ. ಬೆದರಿಸುವ ಕೆಲಸ ಮುಂದುವರೆದಿದೆ ಎಂದು ಟೀಕಿಸಿದ್ದಾರೆ.
- Advertisement 3-
- Advertisement 4-
ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ಇದರ ಕುರಿತು ಚಕಾರ ಎತ್ತಿಲ್ಲ. ಸಿ.ಟಿ.ರವಿ ಅವರ ವಿಷಯದಲ್ಲಿ ಯಾಕೆ ಕಾನೂನು ರೀತಿ ಬಿಟ್ಟು ಕ್ರಮ ಕೈಗೊಂಡಿದ್ದೀರಿ? ನಿನ್ನೆಯ ಎರಡು ಪ್ರಮುಖ ಘಟನೆಗಳಲ್ಲಿ ಯಾರನ್ನು ಬಂಧಿಸಿದ್ದೀರಿ? 500- 600 ಜನ ಠಾಣೆ ಮೇಲೆ ದಾಳಿ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದೂಗಳಿಗೆ ಒಂದು ಕಾನೂನು, ಮುಸ್ಲಿಮರಿಗೆ ಇನ್ನೊಂದು ಕಾನೂನಿದೆಯೇ? ಸರ್ಕಾರ ಪೊಲೀಸರ ವಿರುದ್ಧ ಮಾತನಾಡಿದರೆ ಅವರ ಆತ್ಮಸ್ಥೈರ್ಯ ಉಳಿಯುವುದು ಹೇಗೆ ಎಂದು ಕಿಡಿಕಾರಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ಹಾಗೂ ರಾಜ್ಯದ ಗಮನ ಸೆಳೆಯಲು ಈ ಪ್ರದರ್ಶನ ಮಾಡಿದ್ದೇವೆ. ವಿಪಕ್ಷ ನಾಯಕರ ಜವಾಬ್ದಾರಿ ನಿರ್ವಹಿಸುತ್ತಿದ್ದೇವೆ. ಸರ್ಕಾರ ಉತ್ತರ ಕೊಡುತ್ತಿಲ್ಲ. ನಾವೀಗ ಜನರಿಂದ ಉತ್ತರ ಬಯಸುವಂತಾಗಿದೆ. ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿಸುವಾಗ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ದೊಡ್ಡ ವಿಷಯವನ್ನಿಟ್ಟು ನಿರ್ಮಿಸಿದ್ದಾರೆ. ಹೆಣ್ಣೂ ಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ದೇವರ ಕೆಲಸವೇ? ನಾವು ಹೇಳಿದಂತೆ ನಡೆದುಕೊಳ್ಳದಿದ್ದರೆ ಲಾರಿ ಹತ್ತಿಸುತ್ತೇವೆ ಎಂದು ಬೆದರಿಸುವುದು ದೇವರ ಕೆಲಸವೇ? ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ನುಂಗಿದ್ದಾಗಿ ಹೇಳಿದಾಗ 87 ಕೋಟಿ ರೂ. ಮಾತ್ರ ನುಂಗಿದ್ದಾಗಿ ಹೇಳುವುದು ದೇವರ ಕೆಲಸವೇ? ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಗಳು ಬರೆದಿಟ್ಟ ಹೆಸರುಗಳನ್ನು ಮರೆಮಾಚಿದ್ದು ದೇವರ ಕೆಲಸವೇ ಎಂದು ಪ್ರಶ್ನಿಸಿದ್ದಾರೆ.