ದೇಶದಲ್ಲಿ ಕರ್ನಾಟಕವೊಂದು ಆರ್ಥಿಕ‌ ದೇಶ: ಬ್ರಿಡ್ಜ್ ಟು ಬೆಂಗಳೂರು ಕಾರ್ಯಕ್ರಮದಲ್ಲಿ ಸಿಎಂ ಅಭಿಪ್ರಾಯ

Public TV
4 Min Read
bengaluru tech summit

ನವದೆಹಲಿ: ಕರ್ನಾಟಕ ಕೇವಲ ಸಾಂಸ್ಕೃತಿಕ ಕೇಂದ್ರವಾಗಿಲ್ಲ ಬದಲಿಗೆ ಅದೊಂದು ಆರ್ಥಿಕ ಶಕ್ತಿಕೇಂದ್ರ 337 ಬಿಲಿಯನ್ ಡಾಲರ್ ಜಿಎಸ್‌ಡಿಪಿ ಹೊಂದಿರುವ ನಾವು ಭಾರತದ ನಾಲ್ಕನೇ ದೊಡ್ಡ ಆರ್ಥಿಕತೆ ಹೊಂದಿದ್ದು, ರಾಷ್ಟ್ರದ ಜಿಡಿಪಿಗೆ ಶೇ.9 ರಷ್ಟು ಕೊಡುಗೆಯನ್ನು ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ನಡೆದ ‘ಬ್ರಿಡ್ಜ್ ಟು ಬೆಂಗಳೂರು’ ಕಾರ್ಯಕ್ರಮದಲ್ಲಿ ಭಾಗಿಯಾಗಿ 65 ದೇಶಗಳ ರಾಯಭಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಮತ್ತು ವಿಶ್ವದೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ನಾವೆಲ್ಲಾ ಇಲ್ಲಿ ಸೇರಿದ್ದೇವೆ. ಈ ಮಾತುಕತೆಯು ಕೇವಲ ತಂತ್ರಜ್ಞಾನಕ್ಕೆ ಮಾತ್ರ ಸೀಮತವಾಗಿರದೇ ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ, ಸುಸ್ಥಿರತೆ ಮತ್ತು ನಾವೀನ್ಯತೆಯಲ್ಲಿ ಶಾಶ್ವತ ಪಾಲುದಾರಿಕೆಗಳನ್ನು ಸೃಷ್ಠಿಸುವ ಬಗ್ಗೆಯೂ ಚರ್ಚಿಸಲಿದೆ. ಕರ್ನಾಟಕ ವಿನಿಮಯದ ಹೃದಯ ಭಾಗವಾಗಿದ್ದು, ನಮ್ಮ ದೃಷ್ಠಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತಸವಾಗಿದೆ ಎಂದು ಹೇಳಿದರು.

ಬೆಂಗಳೂರು ಟೆಕ್ ಸಮ್ಮಿಟ್ 2025 ಕ್ಕೆ ಇಂದಿನ ಕಾರ್ಯಕ್ರಮ ಮುನ್ನುಡಿಯಾಗಿದೆ. ಇದು ನಾವೀನ್ಯತೆಗೆ ಏಷ್ಯಾದಲ್ಲಿಯೇ ಮುಂಚೂಣಿಯಲ್ಲಿರುವ ವೇದಿಕೆ. ಅದಕ್ಕೂ ಮಿಗಿಲಾಗಿ ಸಂಪರ್ಕ, ಸಹಯೋಗ ಮತ್ತು ಹಂಚಿಕೊಳ್ಳಬಹುದಾದ ಭವಿಷ್ಯವನ್ನು ರೂಪಿಸಲು ಇದೊಂದು ಸದವಕಾಶ. ನಮ್ಮ ರಾಜಧಾನಿ ಬೆಂಗಳೂರು ಜಾಗತಿಕ ಟೆಕ್ ನಾಯಕನಾಗಿದ್ದು, ಪ್ರಪಂಚದಾದ್ಯಂತ ಪ್ರತಿಷ್ಠಿತ 15 ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. 18,000 ಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗಳಿಗೆ ಬೆಂಗಳೂರು ನೆಲೆಯಾಗಿದ್ದು, 50+ ಯೂನಿಕಾರ್ನ್‌ಗಳು ಮತ್ತು ಭಾರತದ ಶೇ.40ರಷ್ಟು ಸಾಮರ್ಥ್ಯ ಕೇಂದ್ರಗಳು, ಬಾಷ್, ಇಂಟೆಲ್ ಮತ್ತು ಎಸ್ಎಪಿ ಕಂಪನಿಗಳ ಆರ್ & ಡಿ ಕೇಂದ್ರಗಳನ್ನು ಹೊಂದಿದೆ ಎಂದರು.

ನಮ್ಮ ಬಿಯಾಂಡ್ ಬೆಂಗಳೂರು ಯೋಜನೆಯು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬೆಳವಣಿಗೆಯನ್ನು ಪಸರಿಸುತ್ತಿದ್ದು, ಪ್ರತಿ ಪ್ರದೇಶವೂ ಏಳಿಗೆಯಾಗುವುದನ್ನು ಖಾತ್ರಿಪಡಿಸುತ್ತಿದೆ. ಕರ್ನಾಟಕದ ಯಶಸ್ಸು ಅದರ ಜನ ಹಾಗೂ ನೀತಿಗಳಿಂದಾಗಿ ದೊರೆತಿದೆ. ನಿಪುಣ ಕರ್ನಾಟಕ ಕಾರ್ಯಕ್ರಮಗಳ ಮೂಲಕ ನಾವು ಒಂದು ಲಕ್ಷಕ್ಕೂ ಹೆಚ್ಚು ಯುವಜನರಿಗೆ ಮೈಕ್ರೋಸಾಫ್ಟ್ ಮತ್ತು ಅಕ್ಸೆಂಚರ್‌ನಂತಹ ಜಾಗತಿಕ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಎಐ, ಸೈಬರ್ ಸೆಕ್ಯುರಿಟಿ ಮತ್ತು ಜೈವಿಕ ತಂತ್ರಜ್ಞಾನ ಕೌಶಲ್ಯಗಳಲ್ಲಿ ತರಬೇತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

ನಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ಐಐಎಂ, ಬೆಂಗಳೂರು ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಸಂಸ್ಥೆಗಳನ್ನು ಜ್ಞಾನ ಮತ್ತು ನಾವೀನ್ಯತಾ ಕ್ಷೇತ್ರಗಳಿಗೆ ಅವು ನೀಡಿರುವ ಕೊಡುಗೆಗಳಿಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ. ಎಲೆಕ್ಟ್ರಾನಿಕ್ಸ್, ಆನಿಮೇಷನ್, ಗೇಮಿಂಗ್, ಗ್ರೀನ್ ಹೈಡ್ರೋಜನ್, ಪ್ರವಾಸೋದ್ಯಮ ಮತ್ತು ವಿದ್ಯುತ್ ಚಲನೆಗಳಲ್ಲಿ ಕರ್ನಾಟಕದ ಮುಂದಾಲೋಚನೆಯುಳ್ಳ ನೀತಿಗಳು ಸುಸ್ಥಿರ ಅಭಿವೃದ್ಧಿಗೆ ಸದೃಢ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ ಎಂದರು.

2017 ರಲ್ಲಿ ಪ್ರಾರಂಭಿಸಲಾದ ಜಾಗತಿಕ ನಾವಿನ್ಯತಾ ಮೈತ್ರಿಯು ಕರ್ನಾಟಕವನ್ನು ವಿಶ್ವದೊಂದಿಗೆ ಬೆಸೆಯುವ ಸಂಪರ್ಕ ಸೇತುವಾಗಿದೆ. 2018 ರಲ್ಲಿ ವಿಶ್ವದ ಹತ್ತು ದೇಶದೊಂದಿಗಿನ ಮೈತ್ರಿ ಈಗ 35 ದೇಶಗಳಿಗೆ ವಿಸ್ತರಿಸಿದ್ದು, ಜರ್ಮನಿ, ಆಸ್ಟ್ರೇಲಿಯಾ, ಯುಕೆ, ಯುಎಸ್. ಜಪಾನ್, ಇಸ್ರೇಲ್, ಫ್ರಾನ್ಸ್, ಸೌತ್ ಕೊರಿಯಾ, ಫಿನ್ಲ್ಯಾಂಡ್ ಮತ್ತು ಸ್ವಿಟ್ಜರ್ಲ್ಯಾಂಡ್‌ ದೇಶಗಳು ಮೈತ್ರಿಯಲ್ಲಿವೆ. ಶಿಕ್ಷಣ, ಸಂಶೋಧನೆ, ಸ್ಮಾರ್ಟ್ ಸಿಟಿ, ಶುದ್ಧ ಇಂಧನ, ಪ್ರವಾಸೋದ್ಯಮ ಮತ್ತು ವ್ಯಾಪಾರಗಳಲ್ಲಿ ನಮ್ಮೊಂದಿಗೆ ಸಹಯೋಗ ಬೆಳೆಸಲು ಆಹ್ವಾನಿಸುತ್ತೇವೆ ಎಂದು ಹೇಳಿದರು.

ನಮ್ಮ ವಿದ್ಯುನ್ಮಾನ, ಐಟಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಗಳು ಚಾಲನಾ ಶಕ್ತಿಯಾಗಿದ್ದು, ಕರ್ನಾಟಕವು, ಭಾರತದ ಐಟಿ ಕ್ಷೇತ್ರದ ರಫ್ತಿಗೆ ಸುಮಾರು 64 ಬಿಲಿಯನ್ ಡಾಲರ್‌ನಷ್ಟು ಕೊಡುಗೆ ನೀಡಿದೆ. ಇದು ರಾಷ್ಟ್ರದ ಒಟ್ಟು ರಫ್ತಿನ ಮೂರನೇ ಒಂದು ಭಾಗವಾಗಿದೆ. ಎಐ ಕ್ಲಸ್ಟರ್ಸ್, ವಿದ್ಯುನ್ಮಾನ ಪಾರ್ಕ್ ಮತ್ತು ಜೈವಿಕ ನಾವಿನ್ಯತಾ ಹಬ್‌ಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಭವಿಷ್ಯದ ಡಿಜಿಟಲ್ ವಿಷಯಗಳಿಗೆ ಸನ್ನದ್ಧವಾಗುವತ್ತ ಕರ್ನಾಟಕವು ದೇಶದಲ್ಲಿಯೇ ಪ್ರಥಮ ರಾಜ್ಯವಾಗಿದ್ದು, ಆನಿಮೇಶನ್, ವಿಶುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರವನ್ನು ಹೊಂದಿದೆ.

2025 ರ ನವೆಂಬರ್ 18 ರಿಂದ 20 ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ನಮ್ಮ ಈ ಯೋಜನೆಗಳಿಗೆ ಶಕ್ತಿ ತುಂಬಲಿವೆ. ಭವಿಷ್ಯೀಕರಿಸುವ ಎಂಬ ವಿಷಯವನ್ನು ಆಧರಿಸಿದ ಸಮಿಟ್‌ನಲ್ಲಿ, ಕೃತಕ ವಿಜ್ಞಾನ, ಸೆಮಿಕಂಡಕ್ಟರ್ಸ್‌, ಆರೋಗ್ಯ ಹಾಗೂ ಹವಾಮಾನ ತಂತ್ರಜ್ಞಾನಗಳಲ್ಲಿ ಅನ್ವೇಷಣೆಗಳನ್ನು ಕೈಗೊಳ್ಳಲಾಗುವುದು. ನೋಬೆಲ್ ಪುರಸ್ಕೃತರು, ವಿಶ್ವದ ನಾಯಕರು ಹಾಗೂ ನಾವಿನ್ಯಗಾರರನ್ನು ಬೆಂಗಳೂರು ಟೆಕ್ ಸಮಿಟ್ ಸತ್ಕರಿಸಿದೆ. ಈ ವರ್ಷ ಸಮಿಟ್‌ನಲ್ಲಿ ವಿಶ್ವದ 60 ದೇಶಗಳ ಸುಮಾರು 1200 ಪ್ರದರ್ಶಕರು, 600 ಭಾಷಣಕಾರರು ಹಾಗೂ 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಆಶಯ ವ್ಯಕ್ತಪಡಿಸಿದರು.

ಜಾಗತಿಕ ನಾವಿನ್ಯತಾ ಸಹಕಾರವನ್ನು ಆಧರಿಸಿ, ನಿಮ್ಮ ದೇಶಗಳು ನಾವಿನ್ಯತೆಗಳನ್ನು ಪ್ರದರ್ಶಿಸಿ, ವ್ಯಾಪಾರ ಸಭೆಗಳನ್ನು ನಡೆಸಿ, ನಿರ್ವಾಹಕ ಸಭೆಗಳಲ್ಲಿ ಭಾಗವಹಿಸಬಹುದು. ನಿಮ್ಮನ್ನು ನಾವು ಕೇವಲ ಅತಿಥಿಗಳಾಗಿ ಆಹ್ವಾನಿಸದೇ, ಭವಿಷ್ಯ ರೂಪಿಸುವ ನಮ್ಮ ಭಾಗೀಧಾರರಾಗಿ ಆಹ್ವಾನಿಸುತ್ತೇವೆ. ಕರ್ನಾಟಕ ಎಲ್ಲರನ್ನೊಳಗೊಳ್ಳುವ ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿದೆ. ನಮ್ಮ ಹೊಸ ನಾವಿನ್ಯಾತಾ ಜಿಲ್ಲೆಗಳಾದ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಸಂಶೋಧನೆ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಾಣಲಿವೆ. ಮಂಗಳೂರಿನಲ್ಲಿ ಫಿನ್ ಟೆಕ್ ಯೋಜನೆ ಹಾಗೂ ಹುಬ್ಬಳ್ಳಿ ಧಾರವಾಡದಲ್ಲಿ ಡ್ರೋನ್ ಅಭಿವೃದ್ಧಿ ಯೋಜನೆಗಳು ನಮ್ಮ ಸಮತೋಲಿತ ಬೆಳವಣಿಗೆಯಲ್ಲಿನ ದೂರದೃಷ್ಟಿಯನ್ನು ಬಿಂಬಿಸುತ್ತದೆ. ಕರ್ನಾಟಕ ವಿಶ್ವದೊಂದಿಗಿನ ಪಾಲುದಾರಿಕೆಗೆ ಸಿದ್ದವಾಗಿದೆ.

Share This Article