ಬೆಂಗಳೂರು: ಮುಂಗಾರು ಅಧಿವೇಶನದ ಮೊದಲ ದಿನ ವಿಧಾನಸಭೆಯಲ್ಲಿ ಶಾಸಕರಿಗೆ ಬರ ಬಂದಿತ್ತು. ಕೇವಲ 45 ಶಾಸಕರು ಮಾತ್ರ ಹಾಜರಿದ್ರು. ಮೌಢ್ಯದ ಬಗ್ಗೆ ಹಾಸ್ಯದ ಶೈಲಿಯಲ್ಲಿ ಚರ್ಚೆಯಾಯ್ತು.
ಮಳೆಗಾಗಿ ಸಚಿವ ಎಂಬಿ ಪಾಟೀಲ್ ಪರ್ಜನ್ಯ ಹೋಮದ ಬಗ್ಗೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದಾಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿ, ಸರ್ಕಾರ ದುಡ್ಡು ಭರಿಸಲ್ಲ. ಅದು ಎಂಬಿ ಪಾಟೀಲ್ ಸ್ವಂತ ಖರ್ಚು. ಅದು ಅವರ ನಂಬಿಕೆ. ವೈಯಕ್ತಿಕವಾಗಿ ನಾನು ನಂಬುವುದಿಲ್ಲ ಎಂದರು.
ಈ ವೇಳೆ ಎದ್ದು ನಿಂತ ಜಗದೀಶ್ ಶೆಟ್ಟರ್, ಸಚಿವರಾಗಿ ಎಂಬಿ ಪಾಟೀಲ್ ಮಾಡಿದ್ದನ್ನ ಸಿಎಂ ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಬಂದಿರೋದು ಖೇದಕರ. ಮೋಡ ಬಿತ್ತನೆ ಬದಲು ಮೂಢ ಬಿತ್ತನೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈಶ್ವರಪ್ಪ ಗರಂ: ಪರಿಷತ್ನಲ್ಲಿ ಈಶ್ವರಪ್ಪ ಗರಂ ಆಗಿದ್ರು. ವಿಮಲಗೌಡರಿಗೆ ಸಂತಾಪ ಸೂಚಿಸುವ ವೇಳೆ, ಪಕ್ಷಾಂತರ ಮಾಡುವವರು ಪಕ್ಷ ಕಟ್ಟಲು ಬರೋದಿಲ್ಲ. ಅಧಿಕಾರ ಅನುಭವಿಸಲು ಬರುತ್ತಾರೆ ಅಂತ ಪಕ್ಷದ ನಾಯಕರ ವಿರುದ್ಧವೇ ಈಶ್ವರಪ್ಪ ಪರೋಕ್ಷ ವಾಗ್ದಾಳಿ ನಡೆಸಿದರು.
ವಿಮಲಗೌಡರು ಚುನಾವಣೆಗೆ ನಿಂತು ಸೋತಿದ್ದಾಗ ಧೈರ್ಯ ಹೇಳಲು ಹೋಗಿದ್ದೆ. ಆಗ, ಸೋಲು ಬೇಸರ ತಂದಿಲ್ಲ. ನಮ್ಮವರೇ ನಮಗೆ ಸೋಲಿಸಿದ್ರಲ್ಲ ಅಂತ ವಿಮಲ ಬೇಸರಗೊಂಡಿದ್ದರು ಎಂದು ಅವರು ಹೇಳಿದರು.